image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪ್ರಸ್ತಾವನೆಗಳ ಮಂದಗತಿ ವಿಲೇವಾರಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಅರವಿಂದ್ ಕುಮಾರ್ ತೀವ್ರ ಅಸಮಾಧಾನ

ಪ್ರಸ್ತಾವನೆಗಳ ಮಂದಗತಿ ವಿಲೇವಾರಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಅರವಿಂದ್ ಕುಮಾರ್ ತೀವ್ರ ಅಸಮಾಧಾನ

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಮಂದಗತಿಯಲ್ಲಿ ವಿಲೇವಾರಿ ಮಾಡುತ್ತಿರುವುದು ಹಾಗೂ ಹುದ್ದೆಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಅರವಿಂದ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ತನ್ನ 40 ವರ್ಷಗಳ ಅರ್ಥಪೂರ್ಣ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಾರ್ಥಕ ಪಯಣದ ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಂಗದ ಮುಂದಿರುವ ಸವಾಲುಗಳನ್ನು ಅಂಕಿಅಂಶಗಳ ಸಮೇತ ವಿವರಿಸಿದರು. 2023 ರಲ್ಲಿ ರಾಜ್ಯದಲ್ಲಿ 17 ಲಕ್ಷ ಇದ್ದ ವ್ಯಾಜ್ಯಗಳ ಸಂಖ್ಯೆ, 2025 ರ ವೇಳೆಗೆ 22 ಲಕ್ಷಕ್ಕೆ ಏರಿಕೆಯಾಗಿದೆ. ಹೊಸ ಕಾನೂನುಗಳು ಜಾರಿಗೆ ಬರುತ್ತಿದ್ದು, ಅವುಗಳ ಅಡಿಯಲ್ಲಿ ನ್ಯಾಯ ವಿತರಣೆ ಮಾಡಲು ಆಧುನಿಕ ಮೂಲಸೌಕರ್ಯ ಮತ್ತು ಹೆಚ್ಚಿನ ನ್ಯಾಯಾಧೀಶರ ಅಗತ್ಯವಿದೆ. ನ್ಯಾಯಾಂಗ ಇಲಾಖೆಯಿಂದ ಕಳುಹಿಸಲಾದ ಪ್ರಸ್ತಾವನೆಗಳನ್ನು ಸರ್ಕಾರಿ ಅಧಿಕಾರಿಗಳು ಸರಿಯಾಗಿ ಗಮನ ಹರಿಸುತ್ತಿಲ್ಲ ಅಥವಾ ಮಂದಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಹೈಕೋರ್ಟ್‌ನ ಮೂರು ಪೀಠಗಳಿಗೆ 660 ಹುದ್ದೆಗಳನ್ನು ಕೇಳಿದರೆ ಅನುಮೋದನೆ ಸಿಕ್ಕಿದ್ದು ಕೇವಲ 238 ಕ್ಕೆ ಮಾತ್ರ. ಅಂತೆಯೇ ಜಿಲ್ಲಾ ನ್ಯಾಯಾಲಯಗಳಿಗೆ 680 ಹುದ್ದೆಗಳ ಬದಲಿಗೆ ಕೇವಲ 400 ಹುದ್ದೆಗಳಿಗೆ ಒಪ್ಪಿಗೆ ನೀಡಲಾಗಿದೆ. ನ್ಯಾಯಾಧೀಶರ ನಿವಾಸಗಳು ಮತ್ತು ನ್ಯಾಯಾಲಯದ ಕಟ್ಟಡಗಳ ನಿರ್ಮಾಣಕ್ಕೆ ಕಳುಹಿಸಿದ ಪ್ರಸ್ತಾವನೆಗಳು ಇನ್ನೂ ಧೂಳು ಹಿಡಿಯುತ್ತಿವೆ. ಸರ್ಕಾರಕ್ಕೆ ನಾವು ನೀಡುತ್ತಿರುವ ಆದಾಯದ ಪೈಕಿ ಕನಿಷ್ಠ 75-80% ಹಣವನ್ನು ನ್ಯಾಯಾಂಗದ ಅಭಿವೃದ್ಧಿಗೆ ನೀಡಿ ಎಂದು ಅವರು ಮನವಿ ಮಾಡಿದರು. ಸಿಬ್ಬಂದಿ ಸಂಬಳ ಹೊರತುಪಡಿಸಿ ನ್ಯಾಯಾಲಯಗಳ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಹಣ ಅತ್ಯಂತ ಕಡಿಮೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಉಚ್ಚ ನ್ಯಾಯಾಲಯದಿಂದ ಬರುವ ಪ್ರಸ್ತಾವನೆಗಳನ್ನು ಕಡಿತಗೊಳಿಸದೆ ತ್ವರಿತವಾಗಿ ಅನುಮೋದಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಜಸ್ಟಿಸ್ ಅರವಿಂದ್ ಕುಮಾರ್ ಅವರು ವೇದಿಕೆಯಲ್ಲಿದ್ದ ಸರ್ಕಾರಿ ಪ್ರತಿನಿಧಿಗಳಿಗೆ ಆಶಯ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ