ಬೆಂಗಳೂರು: ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಉದ್ದೇಶಿತ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್ಎಐ) ಪರೀಕ್ಷಾ ಕೇಂದ್ರ ಸ್ಥಾಪನೆ ಸಂಬಂಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಿ ಚರ್ಚಿಸಿದರು. ಎಆರ್ಎಐ ನಿರ್ಮಿಸಲು ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಈ ಬಗ್ಗೆ ಮಂಡ್ಯದಲ್ಲಿ ಜಾಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಅವರು ಮಾಡಿದ್ದ ಮನವಿಗೆ ಸಂದ್ಪಿಸಿ 105 ಎಕರೆ ಜಾಗ ನೀಡಲಾಗಿದೆ. ಈ ಕೇಂದ್ರ ಸ್ಥಾಪನೆ ಬಳಿಕ ಸುತ್ತಮುತ್ತ ಕೈಗಾರಿಕೆಗಳು ಆರಂಭಿಸುವಂತೆ ಒತ್ತಾಯ ಬರುತ್ತಿದ್ದು, ಈ ಸಂಬಂಧ 500 ರಿಂದ 1 ಸಾವಿರ ಎಕರೆ ಜಾಗ ನೀಡಬೇಕು. ಇದರಿಂದ ಸುಮಾರು 25 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಜಾಗ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಚಿವ ಎಂ.ಬಿ. ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಇಂದು ನಡೆದ ಸಭೆಯಲ್ಲಿ ಕೇಂದ್ರದ ಕೆಲ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಕುರಿತಂತೆ ಚರ್ಚಿಸಲಾಗಿದೆ. ದೇಶದಲ್ಲಿ ನಾಲ್ಕು ಕಡೆಗಳಲ್ಲಿ ಮಾತ್ರ ಎಆರ್ಎಐ ಇದ್ದು, ಮಂಡ್ಯದಲ್ಲಿ ಸ್ಥಾಪಿಸಲು ಚಿಂತಿಸಲಾಗಿದೆ. ಇದು ನಿರ್ಮಾಣವಾದರೆ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೆಂಟರ್ ಆಗಲಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಂದ ಒಪ್ಪಿಗೆ ಪಡೆಯಲಾಗಿದೆ. ಮೊದಲ ಹಂತದಲ್ಲಿ ₹750 ಕೋಟಿ ವೆಚ್ಚದಲ್ಲಿ ಸೆಂಟರ್ ಪ್ರಾರಂಭಿಸಲಾಗುವುದು ಎಂದರು. ಉದ್ದೇಶಿತ ಕೇಂದ್ರದ ಸುತ್ತಮುತ್ತ 500 ರಿಂದ 1 ಸಾವಿರ ಎಕರೆ ಜಾಗ ಪಡೆದು ಕೈಗಾರಿಕೆ ನಿರ್ಮಾಣವಾದರೆ ಸುಮಾರು 25 ಸಾವಿರ ಉದ್ಯೋಗಗಳು ಸಿಗಲಿವೆ. ಬೆಂಗಳೂರು ಸುತ್ತಮುತ್ತ ಎಆರ್ಎಐ ಮಾಡಿದರೆ ಒಳ್ಳೆಯದಲ್ಲವೆ ಎಂದು ಸಚಿವರು ಹೇಳುತ್ತಿದ್ದಾರೆ. ನಾನು ಮಂಡ್ಯ ಜನರ ಜನರ ಋಣ ತೀರಿಸಬೇಕು. ಹಾಗಾಗಿ ಮಂಡ್ಯದಲ್ಲಿ ಮಾಡುವುದಾಗಿ ತಿಳಿಸಿದ್ದೇನೆ ಎಂದು ಹೇಳಿದರು.