ದಾವಣಗೆರೆ : ದೇಶದಲ್ಲಿ ಕಡ್ಡಾಯ ಮತದಾನ ಪದ್ಧತಿ ಜಾರಿಗೆ ತರಬೇಕು. ಎಲ್ಲವನ್ನೂ ಕಡ್ಡಾಯ ಮಾಡಿರುವಂತೆ ಮತದಾನವನ್ನು ಕಡ್ಡಾಯ ಮಾಡಬೇಕು ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗವೇ ಅಭ್ಯರ್ಥಿಗಳಿಂದ ನಿಗದಿತ ಮೊತ್ತ, ಠೇವಣಿ ಪಡೆದು, ಎಲ್ಲೆಡೆ ಅಭ್ಯರ್ಥಿಗಳ ಪ್ರಚಾರಕ್ಕೆ ವೇದಿಕೆ ಒದಗಿಸಿಕೊಡಬೇಕು. ಅದರಿಂದ ಹಣ, ಸಮಯ ಉಳಿತಾಯ ಆಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಶೇ. 50ಕ್ಕಿಂತಲೂ ಕಡಿಮೆ ಪ್ರಮಾಣದ ಮತದಾನ ನಡೆದಲ್ಲಿ ಆ ಕ್ಷೇತ್ರದ ಚುನಾವಣೆ ಪ್ರಕ್ರಿಯೆ ರದ್ದುಪಡಿಸಬೇಕು ಎಂದರು. ಚುನಾವಣೆಯಲ್ಲಿ ಆಯ್ಕೆಯಾದಂತಹವರು ಸಮರ್ಪಕವಾದ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳದಿದ್ದಲ್ಲಿ ಜನರು ಅವರನ್ನು ವಾಪಸ್ ಕರೆಸಿಕೊಳ್ಳುವಂತಹುದು ಸಹ ಕಡ್ಡಾಯವಾಗಬೇಕು ಎಂದರು.