ಬೆಂಗಳೂರು - ಅಬಕಾರಿ ಇಲಾಖೆಯಲ್ಲಿ ಸಿಎಲ್-7 ಲೈಸೆನ್ಸ್ ಮಂಜೂರು ಮಾಡಲು ಸಚಿವ ಆರ್.ವಿ.ತಿಮಾಪುರ ಹಾಗೂ ಅವರ ಪುತ್ರ ಮತ್ತು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವ ಸ್ಪೋಟಕ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಎಂ.ರವಿಕುಮಾರ್ ಅವರು ಪಕ್ಷದ ಕಚೇರಿಯಲ್ಲಿ ಅಬಕಾರಿ ಸಚಿವ ಆರ್.ವಿ.ತಿಮಾಪುರ ಪರವಾಗಿ ಜಿಲ್ಲಾಧಿಕಾರಿಗಳು ಮಧ್ಯವರ್ತಿಗಳಿಂದ ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯನ್ನು ಬಿಡುಗಡೆ ಮಾಡಿದರು. 1 ನಿಮಿಷ 12 ಸೆಕೆಂಡ್ಗಳ ಮಾತುಕತೆ ಇರುವ ಈ ಆಡಿಯೋದಲ್ಲಿ ಅಬಕಾರಿ ಜಿಲ್ಲಾಧಿಕಾರಿ ಜಗದೀಶ್, ಸೂಪರಿಡೆಂಟ್ ತಮಣ್ಣ ಹಾಗೂ ಕಾನ್ಸ್ಟೇಬಲ್ ಲಕ್ಕಪ್ಪ ಗಣಿ ಅವರುಗಳು ನಡೆಸಿರುವ ಆಡಿಯೋದಲ್ಲಿ ಸಚಿವ ತಿಮಾಪುರ ಅವರಿಗೆ ಎಷ್ಟು ಹಣ ನೀಡಬೇಕು? ಇಲ್ಲದಿದ್ದರೆ ಲೈಸೆನ್ಸ್ ಯಾವ ಕಾರಣಕ್ಕೆ ವಿಳಂಬವಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್, ಅಬಕಾರಿ ಮಂತ್ರಿ ಆರ್.ಬಿ.ತಿಮಾಪುರ ಅವರು ಅಧಿಕಾರದಲ್ಲಿ ಒಂದೇ ಒಂದು ಕ್ಷಣವೂ ಮುಂದುವರೆಯಬಾರದು. ಕನಿಷ್ಠಪಕ್ಷ ಸಾರ್ವಜನಿಕ ಜೀವನದಲ್ಲಿ ಕಿಂಚಿತ್ತಾದರೂ ಘನತೆ ಗೌರವ ಇದ್ದರೆ ತಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪುಟದಿಂದ ವಜಾಗೊಳಿಸಲಿ ಎಂದು ಆಗ್ರಹಿಸಿದರು.
ಒಂದು ವೇಳೆ ತಿಮಾಪುರ ಅವರಿಂದ ಸಿಎಂ ರಾಜೀನಾಮೆ ಪಡೆಯದಿದ್ದರೆ ಮುಖ್ಯಮಂತ್ರಿಗೆ ಅಬಕಾರಿ ಇಲಾಖೆಯಿಂದ 85% ಕಮೀಷನ್ ಹೋಗುತ್ತದೆ ಎಂದರ್ಥ. ನಿಮ ಮೇಲೆ ಕಳಂಕ ಬರಬಾರದೆಂದರೆ ಇಂಥ ಕಳಂಕಿತ ಸಚಿವನನ್ನು ಸಂಪುಟದಿಂದ ಕಿತ್ತು ಹಾಕುವ ಧೈರ್ಯ ತೋರಿ ಎಂದು ಸವಾಲು ಹಾಕಿದರು. ಅಬಕಾರಿ ಡಿಸಿ ಜಗದೀಶ್ ನಾಯಕ್ ಎ1 ಖದೀಮ. ಸೂಪರಿಡೆಂಟ್ ತಮಣ್ಣ 2ನೇ ಖದೀಮ. ಲಕ್ಕಪ್ಪ ಗಣಿ ಹೆಸರಿನಲ್ಲೇ ಗಣಿ ಇದೆ. ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆಡಿಯೋದಲ್ಲಿ ಸಚಿವರಿಗೆ ತಿಂಗಳಿಗೆ ಎಷ್ಟೆಷ್ಟು ಲಂಚ ಕೊಡಬೇಕು? ಕೊಡದಿದ್ದರೆ ಲೈಸೆನ್ಸ್ ಹೇಗೆ ವಿಳಂಬ ಮಾಡುತ್ತಾರೆ ಎಂಬುದನ್ನು ಅವರೇ ಬಾಯ್ಬಿಟ್ಟಿದ್ದಾರೆ. ಇದಕ್ಕಿಂತ ಇನ್ನೇನು ದಾಖಲೆ ಬೇಕು ಎಂದು ಪ್ರಶ್ನೆ ಮಾಡಿದರು.