ಬೆಂಗಳೂರು : ರಾಜ್ಯ ಸರಕಾರ ಕೂಡಲೇ ಮದ್ಯ ಮಾರಾಟ ಮತ್ತು ಸೇವೆಯನ್ನು ನಿಷೇಧಿಸುವಂತೆ ಆಗ್ರಹಿಸಿ ರಾಜ್ಯದ ನಾನಾ ಜಿಲ್ಲೆಗಳ 10 ಸಾವಿರಕ್ಕೂ ಹೆಚ್ಚು ಮಹಿಳೆಯರು 'ಮದ್ಯ ನಿಷೇಧ ಆಂದೋಲನ'ದ ಅಡಿಯಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ಮಂಗಳವಾರ ಬೃಹತ್ ಅನಿರ್ಧಿಷ್ಟಾವಧಿ ಧರಣಿ ನಡೆಸಿದರು. ಮದ್ಯ ಮಾರಾಟಕ್ಕೆ ಪರವಾನಗಿ ನೀಡಲು ಗ್ರಾಮ ಸಭೆಗಳಿಗೆ ಅಧಿಕಾರ ನೀಡಬೇಕು. ಸಭೆಗಳಲ್ಲಿ ಶೇ.20ರಷ್ಟು ಮಹಿಳೆಯರ ಒಪ್ಪಿಗೆ ಪಡೆಯಬೇಕು. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿ ಹಳ್ಳಿಗಳಲ್ಲೂ ಮಹಿಳೆಯರ ಜಾಗೃತಿ ಸಮಿತಿಗಳನ್ನು ರಚಿಸಬೇಕು. ಸಮಿತಿಗಳಿಗೆ ಅರೆ ನ್ಯಾಯಿಕ ಅಧಿಕಾರ ನೀಡಬೇಕೆಂದು ಧರಣಿನಿರತ ಮಹಿಳೆಯರು ಸರಕಾರವನ್ನು ಒತ್ತಾಯಿಸಿದರು. 20 ವರ್ಷಗಳಿಂದ ಕಾನೂನಾತ್ಮಕವಾಗಿ ಮತ್ತು ಕಾನೂನುಬಾಹಿರವಾಗಿ ಮದ್ಯ ಮಾರಾಟ ಹೆಚ್ಚುತ್ತಲೇ ಇದೆ. ಸರಕಾರವು ಕೇವಲ ಮದ್ಯ ಮಾರಾಟದಿಂದ ಬರುವ (ಅಬಕಾರಿ) ಆದಾಯದ ಮೇಲೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪುಟ್ಟ ಮಕ್ಕಳೂ ಕೂಡ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಪುರುಷರು ಮತ್ತು ಮಕ್ಕಳು ಕುಡಿತಕ್ಕೆ ತುತ್ತಾಗುತ್ತಿರುವುದರಿಂದ ಮಹಿಳೆಯರು ತಮ್ಮ ಕುಟುಂಬಗಳನ್ನು ಸಲಹುವುದಕ್ಕಾಗಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದು ಧರಣಿನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಮದ್ಯ ನಿಷೇಧ ಆಂದೋಲನದ ಸಂಘಟಕಿ ಸ್ವರ್ಣಾ ಭಟ್, ಮದ್ಯ ನಿಷೇಧಕ್ಕಾಗಿ 10 ವರ್ಷಗಳಿಂದ ವಿಭಿನ್ನವಾಗಿ ಹೋರಾಟ ನಡೆಸುತ್ತಲೇ ಇದ್ದೇವೆ. 2015ರಲ್ಲಿ ರಾಯಚೂರಿನಲ್ಲಿ ಬೃಹತ್ ಸತ್ಯಾಗ್ರಹ ನಡೆಸಿದ್ದೆವು. ಮೇಧಾ ಪಾಟ್ಕರ್ ಅವರೊಂದಿಗೂ ಚಳವಳಿ ನಡೆಸಿದ್ದೆವು. ಮದ್ಯ ನಿಷೇಧಕ್ಕಾಗಿ ನೀರಿನಲ್ಲಿ ನಿಂತು ಜಲ ಸತ್ಯಾಗ್ರಹ ನಡೆಸಿದ್ದೇವೆ. ಅಬಕಾರಿ ಅಧಿಕಾರಿಗಳಿಗೆ ಗಾಂಧಿ ಫೋಟೋ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲವೆಂದು ಪ್ರತಿಭಟನೆ ನಡೆಸಿದ್ದೇವೆ. ಆದರೂ, ಸರಕಾರಗಳು ನಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ಯ ಮಾರಾಟಕ್ಕೆ ಪರವಾನಗಿ(ಲೈಸನ್ಸ್) ವಿತರಿಸಲು ಹರಿಯಾಣ, ಮಹಾರಾಷ್ಟ್ರ ರಾಜಸ್ಥಾನದಂತ ರಾಜ್ಯಗಳಲ್ಲಿ ಗ್ರಾಮ ಸಭೆಗಳಿಗೆ ಪರಮಾಧಿಕಾರ ನೀಡಲಾಗಿದೆ. ವಿವಿಧ ರಾಜ್ಯಗಳ ಪಂಚಾಯತ್ ರಾಜ್ ಕಾನೂನಿನಂತೆ ರಾಜ್ಯ ಸರಕಾರಗಳು ಯಾವುದೇ ಒಂದು ಮದ್ಯದ ಅಂಗಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಿಗೆ ನೀಡಲು (ತೆರೆಯಲು) ಗ್ರಾಮ ಸಭೆಯಲ್ಲಿ ಕನಿಷ್ಠ 20ರಷ್ಟು ಮಹಿಳೆಯರ ಒಪ್ಪಿಗೆ ಪಡೆಯಬೇಕು. ಅಂದರೆ ಗ್ರಾಮ ಸಭೆಯ ಈ ಠರಾವಿಗೆ ಮಾನ್ಯತೆ ನೀಡಲೇಬೇಕು. ಅದೇ ರೀತಿ, ಕರ್ನಾಟಕದಲ್ಲಿಯೂ ಈ ಅಂಶವನ್ನು ಪಂಚಾಯತ್ ರಾಜ್ ಕಾನೂನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಬೇಕು ಎಂದು ಸ್ವರ್ಣಾ ಭಟ್ ಒತ್ತಾಯಿಸಿದರು. ಹೋರಾಟದಲ್ಲಿ ಭಾಗಿಯಾಗಿದ್ದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕರ್ನಾಟಕ ಮಾತ್ರವಲ್ಲ, ಇಡೀ ಭಾರತದಲ್ಲಿ ಮದ್ಯ ನಿಷೇಧ ಮಾಡಬೇಕು. ಆಗ ಮಾತ್ರವೇ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ. ಜನರು ಸರಕಾರದಿಂದ ಯಾವುದೇ ಲಾಭವನ್ನು ಬಯಸುತ್ತಿಲ್ಲ. ಬದಲಾಗಿ, ನಮ್ಮ ಆರೋಗ್ಯ, ಮಕ್ಕಳ ಶಿಕ್ಷಣ, ದುಡಿಮೆಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ, ಸರಕಾರಗಳು ಯೋಜನೆಗಳ ವಿಸ್ತರಣೆ ಹೆಸರಿನಲ್ಲಿ ಮದ್ಯ ಮಾರಾಟವನ್ನು ಹೆಚ್ಚಿಸುತ್ತಿವೆ. ಜನರ ಆರೋಗ್ಯ, ಹಣ, ಮರ್ಯಾದೆ ಎಲ್ಲವೂ ಮಣ್ಣುಪಾಲಾಗುತ್ತಿದೆ ಎಂದರು. ಇದೇ ವೇಳೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮದ್ಯ ನಿಷೇಧ ಆಂದೋಲನ'ದ ಬೇಡಿಕೆಗಳ ಮನವಿ ಸ್ವೀಕರಿಸಿ ಈಡೇರಿಸುವ ಭರವಸೆ ನೀಡಿದರು. ಧರಣಿಯಲ್ಲಿ 'ಮದ್ಯ ನಿಷೇಧ ಆಂದೋಲನ'ದ ಮಹಿಳೆಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.