ಬೆಳಗಾವಿ : ಪ್ರತಿ ಕ್ವಿಂಟಲ್ ಕಬ್ಬಿಗೆ 3500 ರೂ. ನಿಗದಿ ಮಾಡುವಂತೆ ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಈ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಆದ್ರೆ, ರೈತರ ಶಾಂತಿಯುತ ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರೈತರು ಶಾಂತಿಯೂತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಡಿವೈಎಸ್ಪಿ ಕೈ ಮುರಿದೆ. ಇನ್ನು ನಾಲ್ಕು ಕೆಎಸ್ಆರ್ಟಿಸಿ ಬಸ್ಗಳ ಗ್ಲಾಸ್ ಪುಡಿ ಪುಡಿಯಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬೆಳಗಾಗಿ ಎಸ್ಪಿ ಭೇಟಿ ನೀಡಿದ್ದಾರೆ. ಹತ್ತರಗಿಯಲ್ಲಿ ಕಲ್ಲು ತೂರಾಟದಲ್ಲಿ 4 ಕೆಎಸ್ಆರ್ಟಿ ಬಸ್ ಹಾಗೂ ಲಾರಿಗಳ ಗಾಜು ಪುಡಿ ಪುಡಿಯಾಗಿದೆ. ಬಸ್ಗಳಿಗೆ ಹಾನಿಯಾಗಿರುವುದರಿಂದ ಸ್ಥಳಕ್ಕೆ ಕೆಎಸ್ಆರ್ಟಿಸಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಲಾರಿ ಸೇರಿದಂತೆ ಇತರೆ ವಾಹನಗಳಿಗೂ ಹಾನಿಯಾಗಿದೆ.
ಇನ್ನು ಕಲ್ಲು ತೂರಾಟ ನಡೆಸಿದ ಬಗ್ಗೆ ರೈತ ಮುಖಂಡರು ಪ್ರತಿಕ್ರಿಯಿಸಿ, ನಾವು ಶಾಂತಿಯೂತವಾಗಿ ಧರಣಿ ನಡೆಸುತ್ತಿದ್ದೇವೆ. ಯಾವೋ ಕಿಡಿಗೇಡಿಗಳು ಮಧ್ಯ ನುಸುಳಿ ಬಂದು ಕಲ್ಲು ತೂರಿದ್ದಾರೆ. ಈ ಮೂಲಕ ರೈತರ ಪ್ರತಿಭಟನೆ ದಿಕ್ಕು ತಪ್ಪಿಸಲು ಈ ಕೃತ್ಯ ಎಸಗಿದ್ದಾರೆ ಎಂದರು. ಹಾಗಾದ್ರೆ, ಕಲ್ಲು ಎಸೆದವರು ಯಾರು? ರೈತರ ಪ್ರತಿಭಟನೆ ಬೇರೆ ಸ್ವರೂಪಕ್ಕೆ ಕೊಡೊಯ್ಯಲು ಕಲ್ಲು ತೂರಿದ್ರಾ? ಎನ್ನುವ ಚರ್ಚೆಗಳು ನಡೆಯುತ್ತಿವೆ. ಹತ್ತರಗಿ ಟೋಲ್ ಬಳಿ ವಾಹನಗಳ ಮೇಲೆ ಕಲ್ಲುತೂರಾಟ ಹಿನ್ನೆಲೆಯಲ್ಲಿಸ ಸ್ಥಳಕ್ಕೆ ಉತ್ತರ ವಲಯದ IGP ಚೇತನ್ ಸಿಂಗ್ ರಾಠೋಡ್ ಹಾಗೂ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇದೇ ವೇಳೆ ಭೀಮಾಶಂಕರ ಗುಳೇದ್ ಅವರು ಕಾರಿನೊಳಗೆ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿಯನ್ನು ಕೂಡಿಸಿಕೊಂಡು ಚರ್ಚಿಸಿದರು. ಈ ಮೂಲಕ ರೈತರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಪ್ರತಿಕ್ರಿಯಿಸಿದ್ದು, ಹತ್ತರಗಿ ಟೋಲ್ ಬಳಿ ಕಲ್ಲು ತೂರಾಟವಾಗಿದ್ದು ದುರದೃಷ್ಟಕರ. ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು. ಕೆಲವು ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಲಾಠಿಚಾರ್ಜ್ ಮಾಡದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೆವು. ಕಲ್ಲು ತೂರಾಟದಲ್ಲಿ ನಮ್ಮ 6 ಸಿಬ್ಬಂದಿಗೆ ಗಾಯವಾಗಿದೆ. ಡಿವೈಎಸ್ಪಿಯವರ ಕೈ ಮುರಿದಿದೆ. ಸದ್ಯ ಪುಣೆ-ಬೆಂಗಳೂರು ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದ್ದು, ಏನೆಲ್ಲಾ ಹಾನಿಯಾಗಿದೆ ಎಂದು ಪರಿಶೀಲನೆ ಮಾಡುತ್ತಿದ್ದೇವೆ. ಕಲ್ಲುತೂರಾಟ ಪ್ರಕರಣ ಸಂಬಂಧ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ಹೇಳಿದರು.