ಬೆಂಗಳೂರು : 'ಕಬ್ಬಿಗೆ ಗರಿಷ್ಠ ಚಿಲ್ಲರೆ ಮಾರಾಟ ದರ (ಎಂಆರ್ಪಿ) ನಿಗದಿ ಮಾಡಬೇಕಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರ ಅಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, 'ಕಬ್ಬಿನ ದರ ಹೆಚ್ಚಿಸುವಂತೆ ಕಬ್ಬು ಬೆಳೆಗಾರರು ಬೆಳಗಾವಿ, ಬಾಗಲಕೋಟೆಯಲ್ಲಿ ಪ್ರತಿಭಟಿಸುತ್ತಿರುವುದು ಗಮನಕ್ಕೆ ಬಂದಿದೆ' ಎಂದು ಹೇಳಿದರು. 'ಮಹಾರಾಷ್ಟ್ರದಲ್ಲಿ ಹೆಚ್ಚು ದರ ನೀಡುತ್ತಿದ್ದು, ಅದಕ್ಕೆ ಸಮಾನಾಂತರವಾಗಿ ದರ ನಿಗದಿ ಮಾಡಬೇಕೆಂದು ಕೋರಿದ್ದಾರೆ. ಈ ಸಂಬಂಧ ರೈತರೊಂದಿಗೆ ಚರ್ಚಿಸಲು ಸಚಿವರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ ಜೊತೆ ಮಾತನಾಡಿದ್ದೇನೆ' ಎಂದರು. 'ಕೇಂದ್ರ ಸರ್ಕಾರಕ್ಕೆ ರಾಜ್ಯ ದಿಂದ ₹4.50 ಲಕ್ಷ ಕೋಟಿ ತೆರಿಗೆ ಕೊಡುತ್ತೇವೆ. ಆದರೆ, ಒಂದು ರೂಪಾಯಿಯಲ್ಲಿ ನಮಗೆ ಮರಳಿ ಬರುತ್ತಿರುವುದು ಕೇವಲ 14ರಿಂದ 15 ಪೈಸೆ ಅಷ್ಟೆ. 85 ಪೈಸೆ ತೆರಿಗೆ ದುಡ್ಡು ಅವರೇ ಇಟ್ಟುಕೊಳ್ಳುತ್ತಿದ್ದಾರೆ' ಎಂದರು.