ಬೆಂಗಳೂರು : ರಾಜ್ಯ ಸಚಿವ ಸಂಪುಟವು ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿದ್ದ 5 ಕೆ.ಜಿ. ಅಕ್ಕಿಯನ್ನು ಕಡಿತಗೊಳಿಸಿ, ಅದರ ಬದಲಿಗೆ ಇಂದಿರಾ ಆಹಾರ ಕಿಟ್ಗಳನ್ನು ವಿತರಿಸಲು ತೀರ್ಮಾನಿಸಿದೆ. ಇದರ ಜೊತೆಗೆ ಸರ್ಕಾರಿ ನೇಮಕಾತಿಗಳಲ್ಲಿ ವಯೋಮಿತಿ ಸಡಿಲಿಕೆ ಮತ್ತು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಅವಧಿಯಲ್ಲಿ ರಜೆ ನೀಡುವ ಐತಿಹಾಸಿಕ ನಿರ್ಧಾರಕ್ಕೂ ಸಂಪುಟ ಸಭೆ ಅನುಮೋದನೆ ನೀಡಿದೆ. ಸಚಿವ ಸಂಪುಟದ ನಿರ್ಧಾರದಂತೆ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇನ್ನು ಮುಂದೆ 5 ಕೆ.ಜಿ. ಅಕ್ಕಿ ವಿತರಿಸಲಾಗುವುದಿಲ್ಲ. ಬದಲಾಗಿ, 5 ಕೆ.ಜಿ. ಅಕ್ಕಿಯ ಮೌಲ್ಯಕ್ಕೆ ಸಮನಾದ ಆಹಾರ ಕಿಟ್ ವಿತರಿಸಲು ತೀರ್ಮಾನಿಸಲಾಗಿದೆ. ಈ ಕಿಟ್ನಲ್ಲಿ ತೊಗರಿ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿರುತ್ತದೆ. ಈ ಬಗ್ಗೆ ಮಾತನಾಡಿದ ಸಚಿವರಾದ ಪಾಟೀಲ್ ಅವರು, ಈ ಕಿಟ್ ನೀಡಿಕೆಯಿಂದಾಗಿ ಸರ್ಕಾರದ ಮೇಲೆ ಸ್ವಲ್ಪಮಟ್ಟಿಗೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಕಿಟ್ ವಿತರಣೆಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯಾವ ತಿಂಗಳಿನಿಂದ ಈ ಯೋಜನೆ ಜಾರಿಗೆ ಬರಲಿದೆ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂದಿರಾ ಆಹಾರ ಕಿಟ್ನಲ್ಲಿ ತೊಗರಿ ಬೇಳೆ - 1 ಕೆಜಿ, ಹೆಸರು ಕಾಳು - 1 ಕೆಜಿ, ಅಡುಗೆ ಎಣ್ಣೆ - 1 ಕೆಜಿ, ಸಕ್ಕರೆ - 1 ಕೆಜಿ, ಉಪ್ಪು - 1 ಕೆಜಿ ಇರಲಿದೆ.