ಧಾರವಾಡ : ಪಂಪ್ಸೆಟ್ ವಿದ್ಯುತ್ ಸಂಪರ್ಕಗಳಿಗೆ ಈಗಾಗಲೇ ಶೇ. 60 ರಷ್ಟು ಇರುವ ರಿಯಾಯಿತಿಯನ್ನು ಶೇ. 80 ರಷ್ಟು ಹೆಚ್ಚಳ ಮಾಡಿ ಯಾವುದೇ ಅಕ್ರಮ, ಹೆಚ್ಚುವರಿ ಆರ್ಥಿಕ ವೆಚ್ಚವಾಗದಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂಧನ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು. 2004 ರಿಂದಲೂ ಅಭ್ಯಾಸವಾಗಿರುವ ಅನಧಿಕೃತ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಲು ನಿರ್ಧಿಷ್ಠ ಮಾನದಂಡಗಳನ್ನು ಮಾಡಲಾಗಿದೆ. ಇದಕ್ಕಾಗಿ ಕುಸುಮ ಬಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. 500 ಮೀ. ವ್ಯಾಪ್ತಿಯ ಹೊರಗಿರುವ ಪಂಪ್ಸೆಟ್ ವಿದ್ಯುತ್ ಸಂಪರ್ಕಗಳಿಗೆ ಈಗಾಗಲೇ ಶೇ. 60 ರಷ್ಟು ಇರುವ ರಿಯಾಯಿತಿಯನ್ನು ಶೇ. 80 ರಷ್ಟು ಹೆಚ್ಚಳ ಮಾಡಿ ಯಾವುದೇ ಅಕ್ರಮ, ಹೆಚ್ಚುವರಿ ಆರ್ಥಿಕ ವೆಚ್ಚವಾಗದಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಅವರು ತಿಳಿಸಿದರು. ಇಂಧನ ಇಲಾಖೆಯು ಅಗತ್ಯವಿರುವ 1,500 ಜೆ.ಇ, ಎಇ ಮತ್ತು 3 ಸಾವಿರ ಲೈನ್ಮನ್ಗಳ ನೇಮಕಾತಿ ಮಾಡಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತಿದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ ವಿದ್ಯುತ್ ಕಡಿತ, ಕಡಿಮೆ ಓಲ್ಟೇಜ್ನಂತಹ ಸಮಸ್ಯೆಗಳು ವರದಿಯಾಗುತ್ತಿದ್ದು, ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇಲಾಖೆಯ ಆಂತರಿಕ ಕಾರ್ಯವಿಧಾನಗಳಲ್ಲಿನ ಸಣ್ಣಪುಟ್ಟ ತೊಡಕುಗಳು ಯೋಜನೆಗಳ ಅನುಷ್ಟಾನಕ್ಕೆ ಅಡ್ಡಿಯಾಗಬಾರದು ಎಂದು ಅವರು ಹೇಳಿದರು. ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಉತ್ತಮ ಸಮನ್ವಯ ಇರಬೇಕು. ಯಾವುದೇ ಕಡತಗಳು ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿದರು.
ಜನರಿಗೆ ವಿದ್ಯುತ್ ಬಿಲ್ ಸಂಬಂಧಿತ ಸಮಸ್ಯೆಗಳು, ಹೊಸ ಸಂಪರ್ಕ ಪಡೆಯುವಲ್ಲಿನ ವಿಳಂಬ, ವಿದ್ಯುತ್ ಕಂಬಗಳು ಮತ್ತು ತಂತಿಗಳ ನಿರ್ವಹಣೆ, ಹಲವು ಸಣ್ಣ ಸಣ್ಣ ತೊಂದರೆಗಳು ಎದುರಾಗುತ್ತಿವೆ. ಅದಕ್ಕೆ ಸೂಕ್ತವಾದ ಕ್ರಮಗಳನ್ನು ವಹಿಸಬೇಕೆಂದು ಅವರು ಸೂಚಿಸಿದರು. ಗ್ರಾಹಕ ಸೇವಾ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಬೇಕು ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು. ಮುಂದಿನ ದಿನಗಳಲ್ಲಿ ಇಂಧನ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು. ಪ್ರಸಕ್ತ ಸಾಲಿನ ಮುಂಗಾರು ಮಳೆಗೆ ಧಾರವಾಡ ಜಿಲ್ಲೆಯ ವಿವಿಧ ಕಡೆ ವಿದ್ಯುತ್ ಕಂಬ, ಟಿಸಿ ಮತ್ತು ಇತರ ಪರಿಕರಗಳಿಗೆ ಹಾನಿಯಾಗಿದ್ದು, ಅಂದಾಜು 1.71 ಕೋಟಿ ಮೊತ್ತದ ಹಾನಿಯಾಗಿದೆ ಎಂದು ಸಚಿವರು ತಿಳಿಸಿದರು. ಧಾರವಾಡ ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯ ಗೃಹ ಬಳಕೆ ಸ್ಥಾವರಗಳು 5,59,183 ಪೈಕಿ 5,12,621 ಫಲಾನುಭವಿಗಳು ಇದ್ದು, ಶೇ. 92 ರಷ್ಟು ಫಲಾನುಭವಿಗಳಿಗೆ 2609.15 ಲಕ್ಷ ಅನುದಾನ ಹಂಚಿಕೆಯಾಗಿದೆ ಎಂದರು.