ಮೈಸೂರು: "ಗಣ್ಯರ ಆಯ್ಕೆಯು ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿದ್ದು, ಇದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಚಾಮುಂಡೇಶ್ವರಿ ದೇವಸ್ಥಾನವು ಹಿಂದೂ ಧರ್ಮಕ್ಕೆ ಸೇರಿಲ್ಲ ಎಂಬಂತಹ ಹೇಳಿಕೆಗಳು ಅನಗತ್ಯ" ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಮೈಸೂರು ದಸರಾ ಉದ್ಘಾಟಕರ ಆಯ್ಕೆ ವಿಚಾರದ ಕುರಿತಾದ ಹೇಳಿಕೆಗಳಿಗೆ ಬಹಿರಂಗ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಈ ಬಾರಿ ದಸರಾ ಉದ್ಘಾಟಕರ ಆಯ್ಕೆಯ ಬಳಿಕ ಹೊರಬರುತ್ತಿರುವ ರಾಜಕೀಯ ನಾಯಕರ ಹೇಳಿಕೆಗಳು ಈಗ ಚಾಮುಂಡಿ ಬೆಟ್ಟದ ವಿಚಾರವನ್ನು ಆಕ್ರಮಿಸಿಕೊಂಡಿದ್ದು, ಇದು ಬೇಸರ ತಂದಿದೆ ಎಂದು ತಮ್ಮ ಪತ್ರದಲ್ಲಿ ಈ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಈ ವರ್ಷದ ನಾಡಹಬ್ಬ (ಜನತಾ ದಸರಾ) ಉದ್ಘಾಟನೆಗೆ ಆಹ್ವಾನಿಸಲಾದ ಗಣ್ಯರ ಆಯ್ಕೆಯು ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ಧರ್ಮಕ್ಕೆ ಸೇರಿಲ್ಲ ಎಂಬಂತಹ ಹೇಳಿಕೆಗಳು ಅನಗತ್ಯ. ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಪದ್ಧತಿಗೆ ಅನುಗುಣವಾಗಿ ಪೂಜೆ, ಆಚರಣೆ ನಡೆದರೂ ಹಿಂದಿನಿಂದಲೂ ಅನ್ಯಧರ್ಮೀಯರಿಗೆ ದೇವಸ್ಥಾನದಲ್ಲಿ ಪ್ರವೇಶದ ಅವಕಾಶವಿತ್ತು ಮತ್ತು ಈಗಲೂ ಇದೆ. ಅದು ಹಿಂದೂ ದೇವಸ್ಥಾನವಲ್ಲದಿದ್ದರೆ, ಅದನ್ನು ಎಂದಿಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ತರಲಾಗುತ್ತಿರಲಿಲ್ಲ" ಎಂದು ರಾಜಮಾತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. "ಸರ್ಕಾರದ ದಸರಾ ಒಂದು ಸಾಂಸ್ಕೃತಿಕ ಆಚರಣೆ ಎಂಬುದು ನಮ್ಮ ಪರಿಗಣಿತ ಅಭಿಪ್ರಾಯ. ಸರ್ಕಾರದ ವತಿಯಿಂದ ಯಾವುದೇ ಧಾರ್ಮಿಕ ಪಂಗಡದ ಆಚರಣೆಗಳಿಗೆ ಅವಕಾಶವಿಲ್ಲವಾಗಿದ್ದು, ಅಂತಹ ಉತ್ಸವವನ್ನು ನಡೆಸುವಲ್ಲಿ ಧಾರ್ಮಿಕ ಪಾವಿತ್ರ್ಯ, ಸಂಪ್ರದಾಯ ಅಥವಾ ಪರಂಪರೆಯನ್ನು ಪಡೆಯಲು ಸಾಧ್ಯವಿಲ್ಲ. ಈ ಕಾರಣದಿಂದ ಕರ್ನಾಟಕ ಸರ್ಕಾರ ಆಯೋಜಿಸುವ ಆಚರಣೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೊರತು ಧಾರ್ಮಿಕ ಸಂಪ್ರದಾಯವಾಗಿಲ್ಲ" ಎಂದಿದ್ದಾರೆ. "ಆಶ್ವೀಯುಜ ಶರನ್ನವರಾತ್ರಿ ಸಮಯದಲ್ಲಿ ನಾವು ಖಾಸಗಿಯಾಗಿ ನವರಾತ್ರಿ ಸಂಬಂಧ ಧಾರ್ಮಿಕ ಆಚರಣೆಯು ಹಳೆಯ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಅರಮನೆಯ ಒಳಾಂಗಣದಲ್ಲಿ ಮತ್ತು ಅರಮನೆಯ ಹೊರಾಂಗಳದಲ್ಲಿ ಶಾಸ್ತ್ರೋಕ್ತವಾಗಿ ಪಾಡ್ಯದಿಂದ ನವಮಿ ಪರ್ಯಂತ ಪೂಜೆ ನಡೆಸಿ, ವಿಜಯದಶಮಿ ಆಚರಣೆಯೊಂದಿಗೆ ಪೂರ್ಣಗೊಳ್ಳುತ್ತದೆ. ಇದೇ ದಿನಗಳಲ್ಲಿ ಕರ್ನಾಟಕ ಸರ್ಕಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಮುಂದೆ ಆಯೋಜಿಸಲಾಗಿರುವುದರಿಂದ, ನಮ್ಮ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸಮಯದ ಅತಿಕ್ರಮಣವನ್ನು ತಪ್ಪಿಸಲು, ಶ್ರೀ ಚಾಮುಂಡೇಶ್ವರಿಯ ಉದ್ಘಾಟನೆ ಮತ್ತು ಚಾಮುಂಡೇಶ್ವರಿಯ ಭವ್ಯ ಮೆರವಣಿಗೆಗೆ ಶುಭ ಮತ್ತು ಸೂಕ್ತ ಸಮಯವನ್ನು ನಿಗದಿಪಡಿಸಲಾಗುತ್ತದೆ" ಎಂದು ಅವರು ತಿಳಿಸಿದ್ದಾರೆ. "ಈ ನಿಟ್ಟಿನಲ್ಲಿ ಇಂದಿನ ಗಣೇಶ ಚತುರ್ಥಿಯ ಆಚರಣೆ ಮತ್ತು ಅನುಗ್ರಹದಿಂದ ಎಲ್ಲಾ ಅಡೆತಡೆಗಳು, ತಪ್ಪು ಕಲ್ಪನೆಗಳು ಮತ್ತು ಸಂಘರ್ಷಗಳು ನಿವಾರಣೆಯಾಗಲಿ. ಇದು ಶೀಘ್ರದಲ್ಲೇ ಒಮ್ಮತವನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ರಾಜಮಾತೆ ಪತ್ರದ ಮೂಲಕ ಆಶಿಸಿದ್ದಾರೆ.