image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸ್ಥಳೀಯರನ್ನು ಹೊರಗಿಟ್ಟು ಯುನೆಸ್ಕೋ ಅಧಿಕಾರಿಗಳಿಂದ ಸಭೆ

ಸ್ಥಳೀಯರನ್ನು ಹೊರಗಿಟ್ಟು ಯುನೆಸ್ಕೋ ಅಧಿಕಾರಿಗಳಿಂದ ಸಭೆ

ವಿಜಯನಗರ : ಹೊಸಮಲಪನಗುಡಿಯ ಖಾಸಗಿ ರೆಸಾರ್ಟ್‌ನಲ್ಲಿ ಬುಧವಾರ 'ಯುನೆಸ್ಕೊ' ಅಧಿಕಾರಿಗಳ ಉಪಸ್ಥಿತಿಯಲ್ಲಿ 'ವಿಶ್ವ ಪರಂಪರೆ, ಸುಸ್ಥಿರ ಅಭಿವೃದ್ಧಿ ಮತ್ತು ಸ್ಥಳೀಯ ಸಮುದಾಯಗಳು' ಎಂಬ ವಿಷಯದ ಮೇಲೆ ಸಭೆ ನಡೆದಿದ್ದು, ಸ್ಥಳೀಯರನ್ನು ಮಾತ್ರ ಸಭೆಯಿಂದ ದೂರ ಇಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮತ್ತು ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ) ವತಿಯಿಂದ ಈ ಸಭೆ ನಡೆದಿದ್ದು, ಹಂಪಿ ಮತ್ತು ಸುತ್ತಮುತ್ತಲಿನ ಕಟ್ಟಡ ನಿರ್ಮಾಣ ಉಪ ಕಾನೂನುಗಳು ಮತ್ತು ವಾಸ್ತುಶಿಲ್ಪ ಮಾರ್ಗಸೂಚಿಗಳ ಕುರಿತು ತಾಂತ್ರಿಕ ಸಮಲೋಚನೆ ಮುಖ್ಯ ಉದ್ದೇಶವಾಗಿತ್ತು. ಸ್ಥಳೀಯರನ್ನು ತೊಡಗಿಸಿಕೊಂಡೇ ಈ ಸಭೆ ನಡೆಸಬೇಕೆಂಬ ಸೂಚನೆ ಇದ್ದರೂ, ಅದನ್ನು ಉಲ್ಲಂಘಿಸಿ ಸ್ಥಳೀಯರನ್ನು ಹೊರಗಿಟ್ಟು ಸಭೆ ನಡೆಸಲಾಗಿದೆ, ಸಭೆಯಿಂದ ಜಿಲ್ಲಾಧಿಕಾರಿ ಅವರನ್ನೂ ಸಹ ದೂರ ಇಟ್ಟಿದ್ದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

'ವಿಶ್ವ ಪಾರಂಪರಿಕ ತಾಣವಾಗಿ ಹಂಪಿ ಬದಲಾದ ಬಳಿಕ ಸ್ಥಳೀಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದೊಂದು ಉತ್ತಮ ವೇದಿಕೆ ಆಗಿತ್ತು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಆಯುಕ್ತರನ್ನು ಸಂಪರ್ಕಿಸಿದರೆ ಸಬೂಬು ನೀಡಿ ಜನರ ಅಹವಾಲನ್ನು ಕಡೆಗಣಿಸಿದ್ದಾರೆ' ಎಂದು ಸ್ಥಳೀಯರು ಆರೋಪಿಸಿದರು. 'ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರನ್ನಾದರೂ ಸಭೆಗೆ ಕರೆಯಬೇಕಿತ್ತು. ಜನರಿಗೆ ನೇರವಾಗಿ ಸಿಗುವಂತಹವರು ಇವರೇ. ಇವರನ್ನೇ ಸಭೆಯಿಂದ ದೂರ ಇಡಲಾಗಿದೆ' ಎಂದೂ ಅವರು ದೂರಿದರು.

'ಸ್ಥಳೀಯರನ್ನು ಹೊರಗಿಟ್ಟು ನಡೆಸುವ ಸಭೆಯಿಂದ ಯಾವುದೇ ಅಭಿವೃದ್ಧಿಯೂ ಸಾಧ್ಯವಿಲ್ಲ. ಹಂಪಿಯಲ್ಲಿ ಸಂಗ್ರಹವಾಗುವ ದುಡ್ಡನ್ನು ಹಂಪಿಗೇ ವಿನಿಯೋಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು' ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು. 'ಯಾವುದೇ ಪಾರಂಪರಿಕ ಪ್ರವಾಸಿ ತಾಣ ಉತ್ತಮ ರೀತಿಯಲ್ಲಿ ಇರಬೇಕಿದ್ದರೆ ಸ್ಥಳೀಯ ಮೂಲನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಭಿವೃದ್ಧಿ ಕೆಲಸ ಮಾಡಬೇಕು. 42 ಚದರ ಕಿ.ಮೀ. ಪ್ರದೇಶವನ್ನು ವ್ಯಾಪಿಸಿಕೊಂಡಿರುವ 29 ಹಳ್ಳಿಗಳನ್ನು ಒಳಗೊಂಡ ಹಂಪಿ ಇದೀಗ ಕೆಲವೇ ಕೆಲವು ಬಲಾಡ್ಯರ ಪಾಲಾಗುತ್ತಿದೆ ಕೋರ್ ಏರಿಯಾದಲ್ಲೇ ಬೃಹತ್ ಹೋಟೆಲ್ ರೆಸಾರ್ಟ್ ಕಟ್ಟಿಕೊಳ್ಳಲು ಅವಕಾಶ ಕೊಡಲಾಗಿದೆ. ಸ್ಥಳೀಯರು ಒಂದು ಕಲ್ಲು ಆಚೀಚೆ ಸರಿಸುವುದಕ್ಕೂ ನಿರ್ಬಂಧ ಇದೆ. ಇದರ ಬಗ್ಗೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಇಲ್ಲಿ ಉಳ್ಳವರಿಗೆ ಪ್ರತ್ಯೇಕ ನ್ಯಾಯ ಇರುವಂತೆ ಕಾಣಿಸುತ್ತಿದೆ' ಎಂದು ವಿ.ಎಸ್.ಉಗ್ರಪ್ಪ ಆರೋಪಿಸಿದರು.

Category
ಕರಾವಳಿ ತರಂಗಿಣಿ