ಬೆಂಗಳೂರು: ಗುಜರಾತ್ ರೀತಿಯೇ ನಾವೂ ಅಕ್ರಮ ನುಸುಳುಕೋರರನ್ನು ವಾಪಸ್ ಕಳಿಸುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಅಕ್ರಮ ನುಸುಳುಕೋರರ ಗಡಿಪಾರು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರನ್ನೆಲ್ಲ ಗಡಿಪಾರು ಮಾಡುವ ಪ್ರಕ್ರಿಯೆ ನಡೆದಿದೆ. ಈಗಾಗಲೇ 200ಕ್ಕೂ ಹೆಚ್ಚು ಜನ ಅನಧಿಕೃತವಾಗಿ ತಂಗಿರುವುದು ಪತ್ತೆಯಾಗಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಗಡಿಪಾರು ಮಾಡುತ್ತಿದ್ದೇವೆ. ನಮ್ಮಲ್ಲೂ ಹೆಚ್ಚು ನುಸುಳುಕೋರರು ಇದ್ದರೆ ವಾಪಸ್ ಅವರ ದೇಶಕ್ಕೆ ಕಳುಹಿಸುತ್ತೇವೆ ಎಂದರು.
ಗುಜರಾತ್ ರೀತಿಯೇ ವಾಪಸ್ ಕಳಿಸುತ್ತೇವೆ. ನುಸುಳುಕೋರರ ಬಗ್ಗೆ ನಿತ್ಯ ಪರಿಶೀಲನೆ ನಡೆದಿದೆ. ಗಮನಕ್ಕೆ ಬಂದಷ್ಟು ಗಡಿಪಾರು ಮಾಡ್ತೇವೆ. ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಅಕ್ರಮ ವಲಸಿಗರಿರುವ ಬಗ್ಗೆ ಪರಿಶೀಲುಸುತ್ತೇವೆ. ಅಕ್ರಮವಾಗಿ ಇದ್ದಾರೆ ಅಂದ್ರೆ ಗಡಿಪಾರು ಮಾಡ್ತೇವೆ. ಈ ವಿಚಾರದಲ್ಲಿ ಕಾಂಗ್ರೆಸ್ ಸಾಫ್ಟ್ ಆಗಿದೆ ಅನ್ನೋದು ಸುಳ್ಳು. ಬಾಂಗ್ಲಾ ನುಸುಳುಕೋರರನ್ನು ತಂದು ವೋಟ್ ಹಾಕಿಸಿಕೊಳ್ಳುವಷ್ಟು ಪರಿಸ್ಥಿತಿ ನಮಗೆ ಬಂದಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಗುಜರಾತ್ನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರನ್ನು ಪತ್ತೆ ಮಾಡಿ ಭಾರತದಿಂದ ಹೊರ ಕಳುಹಿಸುವ ಬೃಹತ್ ಕಾರ್ಯಾಚರಣೆಯನ್ನು ಅಲ್ಲಿ ಪೊಲೀಸರು ಮಾಡಿದ್ದರು. ಈ ನಿಟ್ಟಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿಗರನ್ನು ವಶಕ್ಕೆ ಪಡೆದಿದ್ದರು. ಸಿಎಂ ಭೂಪೇಂದ್ರ ಪಟೇಲ್ ಮತ್ತು ಗೃಹ ಸಚಿವ ಹರ್ಷ ಸಂಘ್ವಿ ಸೂಚನೆಯಂತೆ ಈ ಕಾರ್ಯಾಚರಣೆಯನ್ನು ನಡೆಸಿದ್ದರು. ನಕಲಿ ದಾಖಲಾತಿ ಸೃಷ್ಟಿಸಿ, ಅಕ್ರಮವಾಗಿ ಬಾಂಗ್ಲಾದೇಶಿಗರಿಗೆ ನೆರವಾಗುತ್ತಿರುವ ಜಾಲತಾಣಗಳ ಕುರಿತು ತನಿಖೆ ನಡೆಸಲಾಗಿತ್ತು.