ದಾವಣಗೆರೆ: ಭದ್ರಾ ಜಲಾಶಯದ ಬಲದಂಡೆ ಕಾಲುವೆ ಸೀಳಿ ನೀರನ್ನು ಬೇರೆಡೆ ಹರಿಸಲು ಮುಂದಾಗಿರುವ ಕಾಮಗಾರಿ ವಿರೋಧಿಸಿದ ರೈತರು, ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ನಿವಾಸದಲ್ಲಿ ರೈತರೊಂದಿಗೆ ಮಹತ್ವದ ಸಭೆ ನಡೆಸಿದರು.
ಭದ್ರಾ ಬಲದಂಡೆ ಕಾಲುವೆಯನ್ನು ತಿರುಗಿಸಿ ಅಲ್ಲಿಂದ ತರೀಕೆರೆ, ಅಜ್ಜಂಪುರ, ಹೊಸದುರ್ಗದ 1,200 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಯೋಜಿಸಲಾಗಿದೆ. ಇದು ಜಿಲ್ಲೆಯ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ತಲುಪುವುದು ಅನುಮಾನ. ಈ ಸಮಸ್ಯೆಯನ್ನು ತಪ್ಪಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ರೈತರು ಮನವಿ ಮಾಡಿದರು.ಸಭೆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, "ಹೊಸದುರ್ಗ, ತರೀಕೆರೆ, ಅಜ್ಜಂಪುರ ಭಾಗದ ಜನಪ್ರತಿನಿಧಿಗಳು ನಮಗೆ ನೀರು ಹರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇತ್ತ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ಈ ಕಾಮಗಾರಿ ನಿಲ್ಲಿಸಿ ಎಂದು ಒತ್ತಾಯಿಸುತ್ತಿದ್ದೀರಿ. ಇದು ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ ಎಂದರು.
ಕೊನೆಭಾಗದ ರೈತರ ಪರಿಸ್ಥಿತಿ ಅರ್ಥವಾಗುತ್ತದೆ. ಮಂಡ್ಯದಲ್ಲೂ ಇಂಥದ್ದೇ ಸಮಸ್ಯೆ ಎದುರಾಗಿತ್ತು. ದೊಡ್ಡ ಹೋರಾಟ ಮಾಡಿ ನೀರು ಹರಿಸಿದ್ದೇವೆ. ನಾನು ಸ್ಥಳಪರಿಶೀಲನೆ ನಡೆಸಲಿದ್ದೇನೆ. ನೀವು ಯಾರು ಅಲ್ಲಿಗೆ ಬರಬಾರದು. ಬಂದು ಅಲ್ಲಿನ ಜನರೊಂದಿಗೆ ವಾಗ್ವಾದ ಮಾಡಬಾರದು. ಸ್ಥಳ ಪರಿಶೀಲನೆ ಬಳಿಕ ನಿರ್ಧಾರ ಕೈಗೊಳ್ಳೋಣ" ಎಂದರು.ದಾವಣಗೆರೆ ಉಸ್ತುವಾರಿ ಸಚಿವ ಎ.ಸ್ಎಸ್. ಮಲ್ಲಿಕಾರ್ಜುನ್ ಮಾತನಾಡಿ, "ಹೊನ್ನಾಳಿ, ಚನ್ನಗಿರಿ, ದಾವಣಗೆರೆ, ಹರಪನಹಳ್ಳಿ, ಹರಿಹರ ತಾಲೂಕುಗಳು ಭದ್ರಾದ ಜೀವನಾಡಿ. ಇದೇ ನೀರಿನಿಂದ ಭತ್ತ, ಅಡಿಕೆ ಬೆಳೆಯಲಾಗುತ್ತದೆ. ಕುಡಿಯುವ ನೀರಿಗೆ ನಮ್ಮ ವಿರೋಧ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ 15 ಟಿಎಂಸಿ ನೀರು ಬರಬೇಕು. ಅದು ಕೂಡ ಬಂದಿಲ್ಲ ಎಂದರು.