image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿಜೆಪಿ ಸಂಸದ ಡಾ. ಕೆ ಸುಧಾಕರ್‌ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ತಡೆ

ಬಿಜೆಪಿ ಸಂಸದ ಡಾ. ಕೆ ಸುಧಾಕರ್‌ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು : ಲೋಕಸಭೆ ಚುನಾವಣೆ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದಾವರ ಗೋವಿಂದಪ್ಪ ಅವರ ಮನೆಯಲ್ಲಿ 4.8 ಕೋಟಿ ರೂ.ಗಳ ಹಣವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಜಪ್ತಿ ಮಾಡಿದ ಪ್ರಕರಣದಲ್ಲಿ ಬಿಜೆಪಿ ಸಂಸದ ಡಾ. ಕೆ ಸುಧಾಕರ್‌ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಸಂಜ್ಞೆ ಪರಿಗಣಿಸಿರುವ ಕ್ರಮಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಜೂನ್‌ 13ರಂದು ವಿಶೇಷ ನ್ಯಾಯಾಲಯವು ಸುಧಾಕರ್‌ ಮತ್ತು ಮಾದಾವರ ಗೋವಿಂದಪ್ಪ ಅವರ ವಿರುದ್ಧ ಸಂಜ್ಞೆ ಪರಿಗಣಿಸಿರುವುದನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಆರ್‌. ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ತಡೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾಗಿತ್ತು. ಇದಕ್ಕೆ ಸುಧಾಕರ್‌ ವಿರುದ್ಧ ಐಪಿಸಿ ಸೆಕ್ಷನ್‌ 171ಎಫ್‌ ಅಡಿಯಲ್ಲಿ ಸಂಜ್ಞೆ ಪರಿಗಣಿಸಲಾಗಿದೆ. ಇದೇ ನ್ಯಾಯಾಲಯವು ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾದರೆ ಸೆಕ್ಷನ್‌ 171ಎಫ್‌ ಅನ್ವಯಿಸಲಾಗದು ಎಂದು ಆದೇಶಿಸಿದೆ. ಈ ಹಿಂದೆ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದು ಮಾಡಿತ್ತು ಎಂದು ವಿವರಿಸಿದರು. ವಾದ ಆಲಿಸಿದ ನ್ಯಾಯಾಪೀಠ, ನೆಲಮಂಗಲ ಉಪ ವಿಭಾಗದಲ್ಲಿರುವ ಮಾದನಾಯಕನಹಳ್ಳಿ ಪೊಲೀಸರು ಮತ್ತು ದೂರುದಾರ ದಶರಥ ಕುಂಬಾರ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಂಸದ ಡಾ. ಕೆ ಸುಧಾಕರ್‌ ಅವರ ಬೆಂಬಲಿಗ ಮಾದಾವರ ಗೋವಿಂದಪ್ಪ ಅವರ ಮನೆಯಲ್ಲಿ ಖಚಿತ ಮಾಹಿತಿ ಮೇರೆಗೆ ಚುನಾವಣಾಧಿಕಾರಿಗಳು ಶೋಧ ನಡೆಸಿದ್ದು, 4.8 ಕೋಟಿ ರೂ. ಗಳನ್ನು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಅಭ್ಯರ್ಥಿಯಾಗಿದ್ದ ಸುಧಾಕರ್‌ ಅವರು ಚುನಾವಣಾಧಿಕಾರಿಯಾಗಿದ್ದ ಮುನೀಶ್​ ಮೌದ್ಗಿಲ್‌ ಅವರಿಗೆ ವಾಟ್ಸಾಪ್‌ ಮೂಲಕ ಮಾದ್ವಾರ ಗೋವಿಂದಪ್ಪ, ಐಟಿ ಟೀಮ್‌, ದಯಮಾಡಿ ಸಹಾಯ ಮಾಡಿ, ನಿಮಗೆ ಚಿರ ಋಣಿಯಾಗಿರುತ್ತೇನೆ ಎಂಬ ಸಂದೇಶ ಕಳುಹಿಸಿದ್ರು. ಈ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿ, ಚುನಾವಣಾಧಿಕಾರಿಗೆ ಒತ್ತಡ ಹಾಕಿದ್ದಾರೆ ಎಂದು ದೂರಲಾಗಿತ್ತು. ಇದನ್ನು ಮೊದಲಿಗೆ ಹೈಕೋರ್ಟ್‌ನಲ್ಲಿ ಕೆ ಸುಧಾಕರ್‌ ಪ್ರಶ್ನಿಸಿದ್ದರು. ಆಗ ನ್ಯಾಯಾಲಯವು ಹೊಸದಾಗಿ ಪ್ರಕ್ರಿಯೆ ನಡೆಸುವಂತೆ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಸುಧಾಕರ್‌ ಮತ್ತು ಮಾದ್ವಾರ ಗೋವಿಂದಪ್ಪ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 171ಇ, 171ಎಫ್‌ ಮತ್ತು 511ರ ಸಂಜ್ಞೆ ಪರಿಗಣಿಸಿತ್ತು. ಇದನ್ನು ಅವರು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

Category
ಕರಾವಳಿ ತರಂಗಿಣಿ