ಬೆಂಗಳೂರು: ದ್ವೇಷ ಭಾಷಣ, ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ಸರಿಯಲ್ಲ. ಅಂತಹ ಪ್ರಕರಣಗಳನ್ನು ನೋಡಲು ಪೊಲೀಸರು ಇದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ದಳ್ಳಾಳಿಗಳಿಂದ ಹಲ್ಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸುತ್ತಾ, ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕಾನೂನು ಬಾಹಿರ ಚಟುವಟಿಕೆ ಕಂಡು ಬಂದರೆ ಪೊಲೀಸರಿಗೆ ತಿಳಿಸಲಿ. ಪೊಲೀಸರ ಕೆಲಸವೇ ಕಾನೂನು ಕಾಪಾಡೋದು. ನೀವ್ಯಾಕೆ ಆ ಕೆಲಸ ಮಾಡ್ತೀರಿ?. ನೈತಿಕ ಪೊಲೀಸ್ ಗಿರಿ ಮಾಡಬಾರದು ಎಂದು ತಿಳಿಸಿದ್ದೇವೆ. ಮರಕ್ಕೆ ಕಟ್ಟಿ ಹಾಕಿ ಹೊಡೆದಿದ್ದು ಯಾರು?. ಏಕೆ ಅಂತ ಮಾಹಿತಿ ಪಡೆದು ಕ್ರಮ ತಗೋತೇವಿ ಎಂದರು.
ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪೊಲೀಸರು ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ತಗೋತಾರೆ. ಕಾನೂನು ವಿರೋಧಿ ಇದೆಯಾ?. ಎಫ್ಐಆರ್ ಮಾಡಬೇಕಾ ಎಂದು ಪೊಲೀಸರು ಪರಿಶೀಲಿಸಿ ಕ್ರಮ ತಗೋತಾರೆ. ಕಾನೂನು ಬಾಹಿರ ಅನಿಸಿದರೆ ಎಫ್ಐಆರ್ ಮಾಡ್ತಾರೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದಲ್ಲಿ ಹಸು ಕೆಚ್ಚಲು ಕುಯ್ಯುವ ಪ್ರಕರಣಗಳು ಮುಂದುವರಿಕೆ ವಿಚಾರವಾಗಿ ಮಾತನಾಡಿ, ನಮ್ಮ ಸರ್ಕಾರ ಅವರ ಸರ್ಕಾರ ಅನ್ನೋ ಪ್ರಶ್ನೆ ಅಲ್ಲ. ಸಮಾಜದಲ್ಲಿ ಇಂಥ ಘಟನೆಗಳು ನಡೆದಾಗ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಯಾರು ಕೃತ್ಯ ಎಸಗಿದ್ದಾರೋ ಅವರ ಮೇಲೆ ಸೂಮೋಟೋ ಕೇಸ್ ದಾಖಲಿಸಿ ಕ್ರಮ ತಗೋತಾರೆ ಎಂದು ತಿಳಿಸಿದರು.