image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ದೇಶದಲ್ಲಿ ಕಾಂಗ್ರೆಸ್ ಪಕ್ಷವು ಒಬಿಸಿ ಸಮುದಾಯಕ್ಕೆ ನಿರಂತರವಾಗಿ ಮೋಸ ಮಾಡುತ್ತ ಬಂದಿದೆ : ಭೂಪೇಂದ್ರ ಯಾದವ್

ದೇಶದಲ್ಲಿ ಕಾಂಗ್ರೆಸ್ ಪಕ್ಷವು ಒಬಿಸಿ ಸಮುದಾಯಕ್ಕೆ ನಿರಂತರವಾಗಿ ಮೋಸ ಮಾಡುತ್ತ ಬಂದಿದೆ : ಭೂಪೇಂದ್ರ ಯಾದವ್

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷವು ಒಬಿಸಿ ಸಮುದಾಯಕ್ಕೆ ನಿರಂತರವಾಗಿ ಮೋಸ ಮಾಡುತ್ತ ಬಂದಿದೆ ಎಂದು ಕೇಂದ್ರ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ವೈಪರೀತ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಅವರು ಟೀಕಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಮಾಧ್ಯಮಗೋಷ್ಟಿ ಉದ್ಧೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಬಳಿಕ ಒಬಿಸಿ ಸಮುದಾಯಕ್ಕೆ ಮೀಸಲಾತಿ ಲಭಿಸಬೇಕಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಕಾಕಾ ಕಾಲೇಕರ್ ಆಯೋಗದ ವರದಿಯನ್ನು ಮೂಲೆಗೊತ್ತಿತಲ್ಲದೆ, ಅದನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದು ದೂರಿದರು.

ದೇಶವು ತುರ್ತು ಪರಿಸ್ಥಿತಿಯಿಂದ ಸ್ವತಂತ್ರವಾದ ಬಳಿಕ, ಕಾಂಗ್ರೆಸ್ಸೇತರ, ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರ ಪಡೆಯಿತು. ಅಲ್ಲದೇ, ಮಂಡಲ್ ಆಯೋಗ ರಚಿಸಿತು. ಜನತಾ ಪಕ್ಷ ಅಧಿಕಾರಕ್ಕೆ ಬಾರದೆ ಇದ್ದರೆ ಮಂಡಲ್ ಆಯೋಗದ ರಚನೆ ಆಗುತ್ತಿರಲಿಲ್ಲ ಎಂದು ತಿಳಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿ ಬೆಂಬಲಿತ ವಿ.ಪಿ. ಸಿಂಗ್ ಅವರ ಸರ್ಕಾರವು ಮಂಡಲ್ ಆಯೋಗದ ವರದಿ ಜಾರಿಯಾಗಿ ಒಬಿಸಿಗೆ ಮೀಸಲಾತಿಯ ಪ್ರಯೋಜನ ಲಭಿಸಿತು ಎಂದು ತಿಳಿಸಿದರು. ವಿ. ಪಿ. ಸಿಂಗ್ ಅವರ ಸರ್ಕಾರವು ಅಧಿಕಾರ ಗಳಿಸದೆ ಇದ್ದರೆ ಮಂಡಲ್ ವರದಿಯೂ ಅನುಷ್ಠಾನಕ್ಕೆ ಬರುತ್ತಿರಲಿಲ್ಲ ಎಂದು ನುಡಿದರು.

ಬಿಜೆಪಿಯು ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಜಾತಿ ಗಣತಿ ಮಾಡಿಸಲು ಮುಂದಾಗಿದೆ. ನಮ್ಮ ಸಬ್‍ಕಾ ಸಾಥ್, ಸಬ್ ಕಾ ವಿಕಾಸ್ ನೀತಿಯಿಂದ ಸಮಾಜದ ಎಲ್ಲ ವರ್ಗಗಳ ವೈಜ್ಞಾನಿಕ ಅಂಕಿಅಂಶದ ಆಧಾರದಲ್ಲಿ ಅವರ ಜೀವನದಲ್ಲಿ ಪರಿವರ್ತನೆ ತರಲಿದ್ದೇವೆ. ಕಳೆದ 11 ವರ್ಷಗಳಲ್ಲಿ ಮೋದಿಜೀ ಅವರ ನೇತೃತ್ವದಲ್ಲಿ ಸಮಾಜದ ಪ್ರತಿ ವರ್ಗದ ವಿಕಾಸಕ್ಕಾಗಿ ಅಭಿವೃದ್ಧಿ ಕಾರ್ಯಗಳು, ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಒಬಿಸಿಗೆ ಮೋಸ ಮಾಡುವ ಕೆಲಸ ಆಗುತ್ತಿದೆ ಎಂಬುದನ್ನು ಜನರೂ ಅರಿತಿದ್ದಾರೆ. ಕಾಂತರಾಜು ಆಯೋಗದ ವರದಿ ಅನುಷ್ಠಾನಕ್ಕೆ ತಂದಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಒಬಿಸಿ ಸಮುದಾಯದ ಜಾಗದಲ್ಲಿ ಮುಸ್ಲಿಮರ ತುಷ್ಟೀಕರಣಕ್ಕಾಗಿ ಮೀಸಲಾತಿ ಜಾರಿ ಮಾಡಿರುವುದು, 165 ಕೋಟಿ ವೆಚ್ಚದ ವರದಿಯನ್ನು ಮೂಲೆಗೆ ಎಸೆದಿರುವುದು, ನಮ್ಮ ಸರ್ಕಾರದಲ್ಲಿ ಜಾರಿಗೊಳಿಸಿದ ನೀತಿಗಳನ್ನು ರದ್ದು ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗಿದೆ ಎಂದು ಆರೋಪಿಸಿದರು.

Category
ಕರಾವಳಿ ತರಂಗಿಣಿ