image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮಲೆ ಮಹದೇಶ್ವರದಲ್ಲಿ ಮೃತಪಟ್ಟ ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ: ಸಿಸಿಎಫ್ ಸ್ಪಷ್ಟನೆ

ಮಲೆ ಮಹದೇಶ್ವರದಲ್ಲಿ ಮೃತಪಟ್ಟ ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ: ಸಿಸಿಎಫ್ ಸ್ಪಷ್ಟನೆ

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಮೃತಪಟ್ಟ ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎಂಬುದು ದೃಢಪಟ್ಟಿದೆ. ಈ ಕುರಿತು ಮಾಹಿತಿ ನೀಡಿರುವ ಚಾಮರಾಜನಗರ ಸಿಸಿಎಫ್ ಹೀರಾಲಾಲ್ ಅವರು, ಮೃತ ತಾಯಿ ಹುಲಿಗೆ 8 ವರ್ಷಗಳಾಗಿದ್ದು, ಮರಿಗಳು ಸುಮಾರು 10 ತಿಂಗಳು ವಯೋಮಾನದವಾಗಿವೆ ಎಂದು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಐವರು ದನಗಾಹಿಗಳನ್ನು‌ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಹುಲಿಗಳ ಕಳೇಬರ ಪತ್ತೆಯಾದ ಅಣತಿ ದೂರದಲ್ಲೇ ಹಸುವಿನ ಮೃತದೇಹ ಸಿಕ್ಕಿದ್ದು, ಕ್ರಿಮಿನಾಶಕ ಸಿಂಪಡಣೆ ಮಾಡಿರುವುದು ತಿಳಿದುಬಂದಿದೆ. ವಿಷ ಹಾಕಿದ್ದ ಹಸುವನ್ನು ತಿಂದು ಹುಲಿಗಳು ಅಸುನೀಗಿರುವುದು ದೃಢವಾಗಿದ್ದು, ಹಸು ಬೇಟೆಯಾಡಿದ ಕೋಪಕ್ಕೆ ದನಗಾಹಿಗಳೇ ವಿಷ ಇಟ್ಟರೇ, ಇಲ್ಲವೇ ಬೇಟೆಗಾರರು ವಿಷ ಇಟ್ಟಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಘಟನಾ ಸ್ಥಳದಲ್ಲಿ ಸಿಕ್ಕ ಹಸುವಿನ ಮೃತದೇಹದ ಮಾಲೀಕನ ಪತ್ತೆ ಕಾರ್ಯ ಮುಂದುವರೆದಿದೆ. ಹಸುವಿನ ಮಾಲೀಕ ಯಾರೆಂಬುದು ಇನ್ನೂ ಖಚಿತವಾಗಿಲ್ಲ. ಸ್ಥಳಕ್ಕೆ ಶ್ವಾನದಳವೂ ಭೇಟಿ ನೀಡಿ ತನಿಖೆ ಕೈಗೊಂಡಿದ್ದು, ಸರ್ಕಾರ ನೇಮಿಸಿರುವ ತನಿಖಾ ತಂಡದವರೂ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿಧಾಮ ಮತ್ತು ಕಾವೇರಿ ವನ್ಯಜೀವಿಧಾಮದಲ್ಲಿ ಬಹುಪಾಲು ಕುಟುಂಬಕ್ಕೆ ಹೈನುಗಾರಿಕೆಯೇ ಮುಖ್ಯ ಕಸುಬಾಗಿದೆ. ಕಾಡಂಚಿನ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಲು ಬಿಡುವ ಪರಿಪಾಠವಿದೆ. ಈ ವೇಳೆ, ವನ್ಯಜೀವಿಗಳ ದಾಳಿಗೆ ಜಾನುವಾರುಗಳು ಬಲಿಯಾಗಿರುವ ಘಟನೆಗಳು ನಡೆದಿವೆ. ಈಗ ಹುಲಿಗಳ ಸಾವಿಗೆ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಮೀಣ್ಯಂಗೆ ಬಂದು ಸ್ಥಳ ಪರಿಶೀಲಿಸಿ, ಅಧಿಕಾರಿಗಳ ಜೊತೆ ಸಭೆ ನಡೆಸುತ್ತಾರೆಂದು ಸಚಿವರ ಆಪ್ತ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

Category
ಕರಾವಳಿ ತರಂಗಿಣಿ