image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜನಾರ್ದನ ರೆಡ್ಡಿಗೆ ತೆಲಂಗಾಣ ಹೈ ಕೋರ್ಟ್ ಜಾಮೀನು ಮಂಜೂರು, ಜೊತೆಗೆ ಶಿಕ್ಷೆಯೂ ರದ್ದು

ಜನಾರ್ದನ ರೆಡ್ಡಿಗೆ ತೆಲಂಗಾಣ ಹೈ ಕೋರ್ಟ್ ಜಾಮೀನು ಮಂಜೂರು, ಜೊತೆಗೆ ಶಿಕ್ಷೆಯೂ ರದ್ದು

ಹೈದರಾಬಾದ್: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ಕೋರ್ಟ್​ನಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್ ಬಿಗ್​ ರಿಲೀಫ್​ ನೀಡಿದೆ. 7 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತು ಮಾಡಿದ್ದಲ್ಲದೇ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ದೇಶದಲ್ಲಿಯೇ ಭಾರೀ ಸಂಚಲನ ಉಂಟು ಮಾಡಿದ್ದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6 ರಂದು ಸಿಬಿಐ ವಿಶೇಷ ನ್ಯಾಯಾಲಯವು ಗಾಲಿ ಜನಾರ್ದನರೆಡ್ಡಿ ಸೇರಿದಂತೆ ನಾಲ್ವರಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ರೆಡ್ಡಿ ಮತ್ತು ಇತರರು ತೆಲಂಗಾಣ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಅರ್ಜಿದಾರರ ಮನವಿಯನ್ನು ಅಂಗೀಕರಿಸಿರುವ ತೆಲಂಗಾಣ ಹೈಕೋರ್ಟ್, ಸಿಬಿಐ ವಿಶೇಷ ಕೋರ್ಟ್ ನೀಡಿದ ಶಿಕ್ಷೆಯನ್ನು ಇಂದಿನ ವಿಚಾರಣೆಯಲ್ಲಿ (ಜೂನ್​ 11) ಅಮಾನ್ಯ ಮಾಡಿತು. ಇದರಿಂದ ಜೈಲು ಪಾಲಾಗಿದ್ದ ರೆಡ್ಡಿ ಸೇರಿದಂತೆ ನಾಲ್ವರು ಬಿಡುಗಡೆ ಭಾಗ್ಯ ಕಂಡಿದ್ದಾರೆ. ಸಿಬಿಐ ಕೋರ್ಟ್​ನ ಶಿಕ್ಷೆಯನ್ನು ಮಾತ್ರ ರದ್ದು ಮಾಡಲಾಗಿದ್ದು, ಪ್ರಕರಣವು ಹೈಕೋರ್ಟ್​ನಲ್ಲಿ ಮುಂದುವರಿಯಲಿದೆ. ಪ್ರಕರಣದಲ್ಲಿ ಅಪರಾಧಿಗಳು ಎಂದು ಘೋಷಿತರಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡುವಾಗ ಹೈಕೋರ್ಟ್​ ಮೂರು ಷರತ್ತುಗಳನ್ನು ವಿಧಿಸಿದೆ. 10 ಲಕ್ಷ ರೂಪಾಯಿಗಳ ಎರಡು ಶ್ಯೂರಿ ಬಾಂಡ್​​, ವಿದೇಶಕ್ಕೆ ತೆರಳುವಂತಿಲ್ಲ, ಪಾಸ್​ಪೋರ್ಟ್​ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚಿಸಿದೆ.

ಆಂಧ್ರಪ್ರದೇಶಕ್ಕೆ ಸೇರಿದ, ಕರ್ನಾಟಕದ ಗಡಿ ಭಾಗದಲ್ಲಿರುವ ಓಬಳಾಪುರಂ ಗ್ರಾಮದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಓಬಳಾಪುರಂ ಮೈನಿಂಗ್​ ಕಂಪನಿ (ಒಎಂಸಿ) ನಡೆಸಿದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕಂಪನಿಯು ನಿಯಮ ಉಲ್ಲಂಘಿಸಿ, ಅದಿರಿಗಾಗಿ ಕರ್ನಾಟಕ- ಆಂಧ್ರ ನಡುವಿನ ಗಡಿ ರೇಖೆಯನ್ನೇ ಬದಲಿಸಿದ ಆರೋಪವಿದೆ. ಜನಾರ್ದನರೆಡ್ಡಿ ಅವರಿಗೆ ಸಿಬಿಐ ಕೋರ್ಟ್​ 7 ವರ್ಷ ಶಿಕ್ಷೆ ವಿಧಿಸಿದ ಬೆನ್ನಲ್ಲೇ ಅವರ ಶಾಸಕತ್ವ ಅನರ್ಹವಾಗಿತ್ತು. ಇದೀಗ, ಶಿಕ್ಷೆಯೇ ರದ್ದಾಗಿದ್ದರಿಂದ ಶಾಸಕ ಸ್ಥಾನ ಮರಳಲಿದೆ. ರೆಡ್ಡಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಶಾಸಕರಾಗಿದ್ದಾರೆ.

Category
ಕರಾವಳಿ ತರಂಗಿಣಿ