ಮಂಡ್ಯ: ರೈತರ ಜೀವನಾಡಿ KRS ಡ್ಯಾಂ ಬಳಿ ಕಾಶಿ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಡ್ಯಾಂ ಬಳಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಶುಕ್ರವಾರ ಸಚಿವ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ರೈತರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ಯೋಜನೆ ಬಗ್ಗೆ ರೈತರ ಜೊತೆ ಯಾಕೆ ವಿರೋಧ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆ ಶುರುವಾಗುತ್ತಿದ್ದಂತೆಯೇ ಮಂಡ್ಯ ಶಾಸಕರು ರೈತರಿಗೆ ಅವಮಾನ ಮಾಡಿದ್ದಾರೆ. ಕಾವೇರಿ ಆರತಿ ಮಾಡಿಯೇ, ಮಾಡುತ್ತೇವೆ ಅನ್ನುವ ಮಾತು ಹೇಳಿದ್ದಾರೆ. ಜವಾಬ್ದಾರಿಯುತರಾಗಿರುವ ಅವರ ಈ ರೀತಿಯ ಮಾತು ಸರಿಯಲ್ಲ. ಶಾಸಕರ ವಿರುದ್ಧ ರೈತ ಮುಖಂಡ ಕೆಂಪೂಗೌಡ ಆರೋಪಿಸಿದರು. "ಸರ್ಕಾರವೇ KRS ಡ್ಯಾಂ ಸೇಫ್ಟಿ ಮುರಿಯಲು ಹೊರಟಿದೆ. ಅಣೆಕಟ್ಟು ಕೆಡವಲು ಇಂಜಿನಿಯರ್ ಮುಂದಾಗಿದ್ದಾರೆ. ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿಗೆ ವಿರೋಧ ಇದೆ. ಯಾವುದೇ ಕಾರಣಕ್ಕೂ ಈ ಯೋಜನೆ ಮಾಡಲು ಬಿಡಲ್ಲ. ಮುಂದಿನ ಜನಾಂಗಕ್ಕಾಗಿ ಈ ಹೋರಾಟ. ಯಾರನ್ನು ಕೇಳಿ ಈ ತೀರ್ಮಾನ ತೆಗೆದುಕೊಂಡಿದ್ದಿರಿ?"
"ಡಿಸಿಎಂ ಯಾಕೆ ಬರಲಿಲ್ಲ, ಬರಲ್ಲೂ ಬಿಡಲ್ಲ. ಎಂಪಿ ಅವರು ಕೂಡ ಬರಬೇಕು. ಡ್ಯಾಂ ಹತ್ತಿರ ಸಾಂಸ್ಕೃತಿಕ ಕಾರ್ಯಕ್ರಮ ಯಾರು ಕೇಳಿದ್ದಾರೆ?. ಯಾವ ಮುಖ್ಯಮಂತ್ರಿಗಳು ರೈತರನ್ನು ಉಳಿಸಿಲ್ಲ. ಡ್ಯಾಂ ಸೇಫ್ಟಿ ಬಗ್ಗೆ ಯಾವ ಕ್ರಮ ವಹಿಸಿದ್ದಿರಿ? ನೀರಿಗೆ ಕರ್ಪೂರದ ಆರತಿ ಮಾಡಲು 100ಕೋಟಿ ಅವಶ್ಯಕತೆ ಇದ್ಯಾ? KRS ಡ್ಯಾಂ ಬಳಿ ಯಾವ ಕಾಮಗಾರಿ ನಡೆಯಬಾರದು" ಎಂದು ಸಭೆಯಲ್ಲಿ ಸಚಿವರಿಗೆ ರೈತ ಮುಖಂಡೆ ಸುನಂದಾ ಜಯರಾಮ್ ಆಗ್ರಹಿಸಿದರು.