ಬೆಳಗಾವಿ: ಆರ್ಸಿಬಿ ಕಪ್ ಗೆದ್ದರೆ ಸಿಹಿ ಹಂಚುತ್ತೇವೆ ಎಂದು ಹೇಳಿದ್ದ ಮಂಗಳಮುಖಿಯರು ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿಂದು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ನಮ್ಮ ಆರ್ಸಿಬಿ ಗೆದ್ದೇ ಗೆಲ್ಲುತ್ತದೆ. ಗೆದ್ದ ಬಳಿಕ ಒಂದು ದಿನದ ಕಲೆಕ್ಷನ್ ಹಣದಲ್ಲಿ ಸಿಹಿ ಹಂಚುತ್ತೇವೆ ಎಂದಿದ್ದರು. ಆ ಪ್ರಕಾರ ಇಂದು ಬೆಳಿಗ್ಗೆ ಸ್ವೀಟ್ ಬಾಕ್ಸ್ ಹಿಡಿದುಕೊಂಡು ನಗರದ ಚನ್ನಮ್ಮ ವೃತ್ತದ ಸಿಗ್ನಲ್ನಲ್ಲಿ ನಿಂತಿದ್ದ ನಾಗರಿಕರಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು.
ಮಂಗಳಮುಖಿಯರು ಮಾತನಾಡಿ, ಜಗದಂಬೆ ತಾಯಿಗೆ ಪೂಜೆ ಸಲ್ಲಿಸಿ, ನಮ್ಮ ನೆಚ್ಚಿನ ಆರ್ಸಿಬಿ ಗೆಲ್ಲುವಂತೆ ಪ್ರಾರ್ಥಿಸಿದ್ದೆವು. ದೇವಿ ವರ ಕೊಟ್ಟಿದ್ದು, ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಕಪ್ ನಮ್ಮದಾಗಿದೆ. ಮಾತು ಕೊಟ್ಟಂತೆ ಒಂದು ದಿನದ ಕಲೆಕ್ಷನ್ನಲ್ಲಿ ಸಿಹಿ ಹಂಚುತ್ತಿದ್ದೇನೆ. ಈವರೆಗೆ 5 ಕೆ.ಜಿ. ಸಿಹಿ ವಿತರಿಸಿದ್ದು, ಸಂಜೆವರೆಗೆ ಎಷ್ಟು ಆಗುತ್ತದೆಯೋ ಅಷ್ಟು ಹಂಚುತ್ತೇವೆ. ಪ್ರತೀ ಸಾರಿ ನಾವು ಈ ಸಲ ಕಪ್ ನಮ್ಮದೇ ಎನ್ನುತ್ತಿದ್ದೆವು. ಈಗ ಕಪ್ ನಮ್ಮದಾಗಿದೆ. ಬರುವ ಸೀಜನ್ಗಳಲ್ಲೂ ಕಪ್ ನಮ್ಮದೇ ಆಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮ ಆರ್ಸಿಬಿಯನ್ನು ಶ್ರೀರೇಣುಕಾ ಯಲ್ಲಮ್ಮದೇವಿ ಗೆಲ್ಲಿಸುತ್ತಾಳೆ ಅಂತಾ ನಿನ್ನೆಯೇ ನಾನು ಹೇಳಿದ್ದೆ. ಆ ಪ್ರಕಾರ ಏಳುಕೊಳ್ಳದ ತಾಯಿ ಗೆಲ್ಲಿಸಿದ್ದಾಳೆ. ನಿನ್ನೆ ಅಭಿಮಾನಿಗಳು ಪಟಾಕಿ ಸಿಡಿಸಲು ಶುರುವಾಗುತ್ತಿದ್ದಂತೆ ನಮ್ಮ ಹರಕೆ ಫಲ ಕೊಟ್ಟಿತು ಅಂತಾ ಖುಷಿಪಟ್ಟೆವು. ಇದೇ ರೀತಿ ಮುಂದೆಯೂ ಗೆಲ್ಲಲಿ ಅಂತಾ ರೇಣುಕಾ ಕಾಂಬಳೆ ಶುಭ ಹಾರೈಸಿದರು.