image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಡಾ.ರಮಾನಂದ ಬನಾರಿ, ಪ್ರೊ.ಎಂ.ಎಲ್ ಸಾಮಗ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇವರಿಗೆ ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ

ಡಾ.ರಮಾನಂದ ಬನಾರಿ, ಪ್ರೊ.ಎಂ.ಎಲ್ ಸಾಮಗ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇವರಿಗೆ ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ

ದಕ್ಷಿಣ ಕನ್ನಡ : ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್​​​​ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2024ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಅರ್ಥದಾರಿ, ವಿದ್ವಾಂಸರಾಗಿರುವ ಡಾ.ರಮಾನಂದ ಬನಾರಿ, ಹಿರಿಯ ಯಕ್ಷಗಾನ ಕಲಾವಿದ, ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ಹಾಗೂ ತೆಂಕುತಿಟ್ಟು ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಅವರು ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಲೇಖಕ, ಹಿರಿಯ ಪತ್ರಕರ್ತ ಶಿರಸಿಯ ಅಶೋಕ ಹಾಸ್ಯಗಾರ ಅವರ 'ದಶರೂಪಕಗಳ ದಶಾವತಾರ' ಕೃತಿಯು ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು 10,000 ರೂ. ನಗದು,‌ ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.

ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೆಶಕರಾದ‌ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯು ಈ ಹೆಸರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಜೂನ್ ತಿಂಗಳಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ.ಪಿ‌ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಮಂಗಳ ಪ್ರಶಸ್ತಿ ಮತ್ತು ಕೃತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಲಸಚಿವರಾದ ಕೆ.ರಾಜು ಮೊಗವೀರ ಹಾಗೂ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಯಕ್ಷಗಾನ ಅರ್ಥದಾರಿ,‌ ವಿದ್ವಾಂಸರು ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ರಮಾನಂದ ಬನಾರಿ ಅವರು 1940ರ ಜೂನ್ 4ರಂದು ಕಾಸರಗೋಡಿನ ಕಿರಿಕ್ಕಾಡುವಿನಲ್ಲಿ ಜನಿಸಿದರು. ಎಂಬಿಬಿಎಸ್ ಪದವೀಧರರಾಗಿರುವ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ, ಯಕ್ಷಗಾನ, ಕನ್ನಡ ಸಂಸ್ಕ್ರತಿ ಪರ ಹೋರಾಟ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆ ಕೀರಿಕ್ಕಾಡು ವಿಷ್ಡುಮಾಸ್ಟರ್ ಅವರಿಂದ ಯಕ್ಷಗಾನದ ಪ್ರೇರಣೆ ‌ಪಡೆದ ಇವರು 16ನೇ ವಯಸ್ಸಿನಲ್ಲೇ ಅರ್ಥಗಾರಿಕೆಯಲ್ಲಿ ತೊಡಗಿಸಿಕೊಂಡು ಕರ್ಣ,‌ ಅರ್ಜುನ,‌ ರಾಮ, ಕೃಷ್ಣ, ರಾವಣ ಮೊದಲಾದ ಪಾತ್ರಗಳನ್ನು ನಿಭಾಯಿಸಿದ್ದರು. ಜೊತೆಗೆ, ಮಕ್ಕಳ ಕವನ ಸಂಕಲನ, ಹನಿಗವನ ಸಂಕಲನ, ಆರೋಗ್ಯ ಗೀತೆ, ವೈದ್ಯಕೀಯ ಕವನ ಸಂಕಲನ ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜೀವವೃಕ್ಷ ಇವರ ಅಭಿನಂದನಾ ಗ್ರಂಥವಾಗಿದೆ.

ಯಕ್ಷಗಾನ‌ ಕಲಾವಿದರು, ಅರ್ಥದಾರಿ, ಶಿಕ್ಷಣ ತಜ್ಞ ಪ್ರೊ.ಎಂ.ಎಲ್.ಸಾಮಗ ಅವರು ನಾಡಿನ ಶ್ರೇಷ್ಠ ವಿದ್ವಾಂಸರೂ ಆಗಿದ್ದಾರೆ. ಯಕ್ಷಕಲೆಯ ದಿಗ್ಗಜರಾದ ಶಂಕರನಾರಾಯಣ ಸಾಮಗರ ಪುತ್ರನಾದ ಎಂ.ಲಕ್ಷ್ಮೀನಾರಾಯಣ ಸಾಮಗ ಅವರು ಜನವರಿ‌ 31, 1949ರಲ್ಲಿ ಜನಿಸಿದರು. ಯಕ್ಷಗಾನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯಕ್ಷಗಾನದ ತೆಂಕು ತಿಟ್ಟು ಹಾಗೂ ಬಡಗುತಿಟ್ಟು ಎರಡು ಪ್ರಕಾರಗಳಲ್ಲೂ ಕಲಾಪ್ರೌಢಿಮೆಯನ್ನು ಮೆರೆದಿರುವ ಇವರು ಉತ್ತಮ ಕಲಾವಿದರಾಗಿ, ಅರ್ಥದಾರಿಯಾಗಿ ಗುರುತಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಸಾಮಗರು ಯಕ್ಷಗಾನ ಮಾತ್ರವಲ್ಲದೆ ನಾಟಕ, ಕಥೆ , ಕವನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಸಾಧನೆ ಮಾಡಿದ ಹಿರಿಯರಾಗಿದ್ದಾರೆ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ಸದಾಶಿವ ಶೆಟ್ಟಿಗಾರ್​ ಸಿದ್ದಕಟ್ಟೆ ಅವರು ಖ್ಯಾತ ಬಣ್ಣದ ವೇಷಧಾರಿಯಾಗಿ ಗುರುತಿಸಿದ್ದಾರೆ. ಕೀರ್ತಿಶೇಷ ಕಲಾವಿದರಾದ ಬಣ್ಣದ ಮಾಲಿಂಗ ಹಾಗೂ ರೆಂಜಾಳ ರಾಮಕೃಷ್ಣ ಅವರಲ್ಲಿ ನಾಟ್ಯಾಭ್ಯಾಸ ಮಾಡಿದ್ದ ಇವರು 18ರ ಹರೆಯದಲ್ಲಿ ರಂಗಪ್ರವೇಶ ಮಾಡಿದ್ದರು. ಕಟೀಲು, ತಲಕಳ, ಧರ್ಮಸ್ಥಳ, ಹೊಸನಗರ, ಹನುಮಗಿರಿ ಸೇರಿಂದಂತೆ ಅನೇಕ ಮೇಳಗಳಲ್ಲಿ ವ್ಯವಸಾಯ ಮಾಡಿರುವ ಇವರ ಮಹಿಷಾಸುರ, ರುದ್ರ, ಭೀಮ, ಸಿಂಹ, ಕುಂಭಕರ್ಣ, ಶೂರ್ಪನಖಿ, ತಾಟಕಿ ಮೊದಲಾದ ಪಾತ್ರಗಳಿಗೆ ತನ್ನದೇ ವರ್ಚಸ್ಸು ತೋರಿ ಪಾತ್ರಕ್ಕೆ ಮೆರುಗು ತುಂಬಿದವರು. ಪಾತ್ರಗಳ ನಿರ್ವಹಣೆಯಲ್ಲಿಯೂ ಕೂಡ ವೈ಼ಶಿಷ್ಟ್ಯತೆಯ ಮೂಲಕ ಸಾವಿರಾರು ಯಕ್ಷಾಭಿಮಾನಿಗಳ ನಲ್ಮೆಯ ಕಲಾವಿದರಾಗಿದ್ದಾರೆ. ಹಿರಿಯ ಪತ್ರಕರ್ತ, ವಿಮರ್ಶಕ ಅಶೋಕ ಹಾಸ್ಯಗಾರ ಅವರ 'ದಶರೂಪಕಗಳ ದಶಾವತಾರ' ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿ ಸಿಕ್ಕಿದೆ. ಈ ಕೃತಿಯು ಯಕ್ಷಗಾನ ಹಾಗೂ ನಾಟ್ಯಶಾಸ್ತ್ರವನ್ನು ತುಲನಾತ್ಮಕವಾಗಿ ನೋಡುವ ಒಂದು ಪಠ್ಯವಾಗಿದೆ. ಶೋಧನೆಯ ಸೂಕ್ಷ್ಮದೃಷ್ಟಿ ಹೊಂದಿರುವ ಕೃತಿಯಲ್ಲಿ 9 ಅಧ್ಯಾಯಗಳಿವೆ. ಸಂಶೋಧನೆಯ ಹೊಸ ಸಂಗತಿಗಳು, ಹೊಸ ಕ್ಷೇತ್ರಗಳನ್ನು ತೆರೆದಿಡುವ ಕಾಳಜಿಯನ್ನು ಹೊಂದಿದೆ. ರಂಗ ಲಕ್ಷಣ, ವಿಸ್ತೀರ್ಣ, ಚೌಕಿಯಲ್ಲಿ ಪಾತ್ರದಾರಿಗಳು ಕುಳಿತುಕೊಳ್ಳುವ ವಿನ್ಯಾಸ, ಹೀಗೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಈ ಕೃತಿಯು ಯಕ್ಷಗಾನ ಸಂಶೋಧನೆಗೆ ಮಹತ್ವದ‌ ಕೊಡುಗೆಯಾಗಿದೆ.

Category
ಕರಾವಳಿ ತರಂಗಿಣಿ