ಬೆಂಗಳೂರು: "ಮಳೆಗಾಲ ಬಂದಾಗ ಮುನ್ನೆಚ್ಚರಿಕೆ ಇರಬೇಕು. ಬಿಬಿಎಂಪಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ತಗ್ಗು ಪ್ರದೇಶಗಳಲ್ಲಿ ಕಾಮಗಾರಿ ಹಮ್ಮಿಕೊಂಡರೆ ಏನಾಗುತ್ತದೆ" ಎಂದು ಸಚಿವ ಜಿ. ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಬೆಂಗಳೂರು ಮಳೆ ಅವಾಂತರದ ಬಗ್ಗೆ ಪ್ರತಿಕ್ರಿಯಿಸುತ್ತಾ, "ಮೇ ಜೂನ್ ಮಳೆಗಾಲ. ತಗ್ಗು ಪ್ರದೇಶಗಳಲ್ಲಿ ಕಾಮಗಾರಿ ಹಮ್ಮಿಕೊಂಡರೆ ಏನಾಗುತ್ತದೆ?. ಇದರ ಅನುಭವ ಅಧಿಕಾರಿಗಳಿಗೆ ಇರಬೇಕು. ಬಿಬಿಎಂಪಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ವೈಟ್ ಟಾಪಿಂಗ್, ಕೇಬಲ್ ವೈರ್ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಹತ್ತಿರ ಬರುತ್ತಿದೆ. ಹೀಗಾಗಿ ಜಾಗ್ರತೆ ವಹಿಸಬೇಕಿತ್ತು" ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
"ಮಳೆಯಿಂದ ತುಂಬಾ ತೊಂದರೆಯಾಗಿದೆ. ಸಿಲ್ಕ್ ಬೋರ್ಡ್ನಲ್ಲಿ ನೀರು ನುಗ್ಗಿದೆ. ಬೇರೆ ಕಡೆಗಳಲ್ಲೂ ನೀರು ನುಗ್ಗಿದೆ. ಇದರಿಂದ ಟ್ರಾಫಿಕ್ಗೆ ತೊಂದರೆ ಅಂತಿದ್ದಾರೆ. ಡಿಸಿಎಂ ಡಿಕೆಶಿ ಹೊಸಪೇಟೆಯಲ್ಲಿದ್ದಾರೆ. ಅವರು ಸೂಚನೆ ಕೊಟ್ಟಿದ್ದಾರೆ ಅಂತ ಕೇಳಿದ್ದೇನೆ. ವಲಯವಾರು ಜಂಟಿ ಆಯುಕ್ತರು ಇರುತ್ತಾರೆ. ಅವರು ಕ್ರಮ ವಹಿಸುತ್ತಾರೆ" ಎಂದು ತಿಳಿಸಿದರು.
ತುಮಕೂರು ಮೆಟ್ರೋಗೆ ತೇಜಸ್ವಿ ವಿರೋಧ ವಿಚಾರವಾಗಿ ಮಾತನಾಡುತ್ತಾ, "ಹತ್ತು ವರ್ಷದ ಹಿಂದೆ ಮೆಟ್ರೋ ಕೇಳಿದ್ದೆ. ನಾನು ತುಮಕೂರಿಗೆ ಮೆಟ್ರೋ ಬೇಕು ಅಂದಿದ್ದೆ. ತುಮಕೂರಿಗೆ ಮೆಟ್ರೋ ಬಂದ್ರೆ ಟ್ರಾಫಿಕ್ ಕಡಿಮೆ ಆಗಲಿದೆ. ಬೆಂಗಳೂರು ಟ್ರಾಫಿಕ್ ಒತ್ತಡ ಕಡಿಮೆ ಆಗುತ್ತದೆ. ಕಳೆದ ಬಾರಿ ಸಿಎಂ ಮನವೊಲಿಸಿದ್ದೆ. ಬಜೆಟ್ನಲ್ಲಿ ಪ್ರಕಟ ಮಾಡಿಸಿದ್ದೇವೆ. ಹೈದ್ರಾಬಾದ್ ಕಂಪನಿ ಡಿಪಿಆರ್ ಕೊಟ್ಟಿದೆ. ಸಾಧಕ ಬಾಧಕ ನೋಡಿಯೇ ವರದಿ ನೀಡಲಾಗಿದೆ" ಎಂದರು.