ಕಾರವಾರ : ಭಾರತ-ಪಾಕಿಸ್ತಾನ ಮಧ್ಯೆ ಬಿಕ್ಕಟ್ಟಿನ ನಡುವೆ ಇರಾಕ್ ಮೂಲದ ಸರಕು ಸಾಗಾಟ ಹಡಗಿನ ಮೂಲಕ ಕಾರವಾರದ ಬಂದರಿಗೆ ಆಗಮಿಸಿದ್ದ ಪಾಕ್ ಹಾಗೂ ಸಿರಿಯಾ ಮೂಲದ ಪ್ರಜೆಗಳಿಗೆ ಹಡಗಿನಲ್ಲಿಯೇ ದಿಗ್ಬಂಧನ ವಿಧಿಸಿ, ಇದೀಗ ವಾಪಸ್ ಕಳುಹಿಸಲಾಗಿದೆ. ಇರಾಕ್ನ ಅಲ್ ಜುಬೇರ್ನಿಂದ ಕಾರವಾರ ಬಂದರಿಗೆ ಪಾಕಿಸ್ತಾನದ ಓರ್ವ, ಭಾರತ ಮೂಲದ 15 ಹಾಗೂ ಸಿರಿಯಾದ ಇಬ್ಬರು ಪ್ರಜೆಗಳು ಸರಕು ಸಾಗಾಣಿಕೆ ಹಡಗಿನ ಮೂಲಕ ಆಗಮಿಸಿದ್ದರು.
ಬಿಟುಮಿನ್ ತುಂಬಿಕೊಂಡು ಆಗಮಿಸಿದ್ದ ಹಡಗಿನಲ್ಲಿ ಎರಡು ದಿನ ಇವೆರಲ್ಲರೂ ಕಾರವಾರ ಬಂದರಿನಲ್ಲಿದ್ದರು. ಈ ವಿಚಾರವು ಬಂದರು ಇಲಾಖೆ ಅಧಿಕಾರಿಗಳಿಗೆ ತಿಳಿದು ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದ್ದರು. ಅದರಂತೆ, ಪಾಕಿಸ್ತಾನಿ ಹಾಗೂ ಸಿರಿಯಾ ಪ್ರಜೆಗಳ ದಾಖಲಾತಿ ಪರಿಶೀಲಿಸಿದ ಪೊಲೀಸರು ವಿಚಾರಣೆ ನಡೆಸಿದ್ದರು.
ಬಳಿಕ ಅವರ ಮೊಬೈಲ್ಗಳನ್ನು ಹಡಗಿನ ಕ್ಯಾಪ್ಟನ್ ಮೂಲಕ ಸೀಜ್ ಮಾಡಿಸಿ, ಬಂದರಿಗೆ ಇಳಿಯದಂತೆ ಸೂಚನೆ ನೀಡಲಾಗಿತ್ತು. ಬುಧವಾರ ಬಂದರಿನಲ್ಲಿ ಅನ್ಲೋಡ್ ಕಾರ್ಯ ಮುಕ್ತಾಯಗೊಂಡಿದ್ದು, ನಿಬಂಧನೆ ಮೂಲಕ ಅದೇ ಹಡಗಿನ ಮೂಲಕ ವಾಪಸ್ ಕಳುಹಿಸಲಾಗಿದೆ. ಪಹಲ್ಗಾಮ್ ದಾಳಿಯ ನಂತರ ಭಾರತದ ಬಂದರುಗಳಿಗೆ ಪಾಕಿಸ್ತಾನ ಹಾಗೂ ಚೀನಾದ ಹಡಗುಗಳಿಗೆ ನಿರ್ಬಂಧ ವಿಧಿಸಲಾಗಿದೆ.
''ಇರಾಕ್ ಮೂಲಕ ಆಗಮಿಸಿದ ಸರಕು ಸಾಗಣೆಯ ಹಡಗಿನಲ್ಲಿ ಪಾಕಿಸ್ತಾನ ಹಾಗೂ ಸಿರಿಯಾದ ಪ್ರಜೆಗಳು ಆಗಮಿಸಿದ್ದರು. ಅವರಿಗೆ ಮೊಬೈಲ್ ಬಳಸದಂತೆ ಸೂಚನೆ ನೀಡಿ ವಾಪಸ್ ಕಳುಹಿಸಿದ್ದೇವೆ. ಕರಾವಳಿ ತೀರದಲ್ಲಿಯೂ ಭದ್ರತೆಯನ್ನು ಹೆಚ್ಚಿಸಿ ಸೂಕ್ಷ್ಮ ಪ್ರದೇಶದಲ್ಲಿ ಹದ್ದಿನ ಕಣ್ಣಿಡಲಾಗಿದೆ'' ಎಂದು ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ನಿಶ್ಚಲಕುಮಾರ್ ಮಾಹಿತಿ ನೀಡಿದ್ದಾರೆ.