ಬೆಂಗಳೂರು: ಎಲ್ಲಾ ನಗರ ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಡುವ ಮೂಲಕ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುವ ಸ್ವಚ್ಛತಾ ನೌಕರರ ಬಗ್ಗೆ ಇನ್ನುಮುಂದೆ 'ಜಾಡಮಾಲಿ' (jadamaali) ಪದ ಬಳಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ತಾವು ಕಳೆದ 14ರಿಂದ 34 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ನೌಕರರಾಗಿ (ಸ್ವೀಪರ್ ಉದ್ಯೋಗ) ಸೇವೆ ಸಲ್ಲಿಸಿದ್ದು, ತಮ್ಮ ಸೇವೆ ಕಾಯಂಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಮೇಶ್ ಬಾಬು ಮತ್ತಿತರ ಸ್ವಚ್ಛತಾ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ( krishna s deekshith) ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಅಲ್ಲದೇ, ಈ ರೀತಿಯ ಪದಗಳನ್ನು ಕೇಳಿದರೆ ನೋವಾಗುತ್ತದೆ. ಇವು ಸಂತೋಷ ತರಿಸುವಂತಹ ಪದನಾಮಗಳು (ಡಿಸಿಗ್ನೇಷನ್) ಅಲ್ಲ. ಹಾಗಾಗಿ, ಎಲ್ಲಾ ನಗರ ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿ ಇಡುವ ಮೂಲಕ ಸ್ವಚ್ಛತಾ ನೌಕರರು ಸಮಾಜಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸುತ್ತಾರೆ. ಅಂತಹ ಒಂದು ವರ್ಗದ ನೌಕರರನ್ನು ಉದ್ದೇಶಿಸಿ ಬಳಸುವ ಪದ ಗೌರವದಿಂದ ಕೂಡಿರಬೇಕು. ಹಾಗಾಗಿ, ಸರ್ಕಾರ ಇನ್ನು ಮುಂದೆ ಜಾಡಮಾಲಿ ಪದದ ಬದಲಾಗಿ ಸ್ವಚ್ಛತಾ ನೌಕರರು ಎಂಬುದಾಗಿಯೇ ಬಳಸುವುದು ಸೂಕ್ತ ಎಂದು ಪೀಠ ಸೂಚಿಸಿತು.