ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನಿರಾಣಿ ಸಕ್ಕರೆ ಕಾರ್ಖಾನೆ(sugar factory) 240 ಕೋಟಿ ರು. ಬಾಕಿ ಹಣ ಉಳಿಸಿಕೊಂಡಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಸಕ್ಕರೆ ಮಾರಾಟ ಮಾಡಿ ರೈತರಿಗೆ ಹಣ ಪಾವತಿಸುವುದಾಗಿ ದೃಢೀಕರಿಸಿ ಪ್ರಮಾಣಪತ್ರ ಸಲ್ಲಿಸಲು ನಿರಾಣಿ(nirani) ಶುಗರ್ಸ್ ಲಿಮಿಟೆಡ್ಗೆ ಸೂಚನೆ ನೀಡಿದೆ.
ರೈತರಿಗೆ ಹಣ ಪಾವತಿ ಮಾಡುವಂತೆ ಸೂಚಿಸಿ ರಾಜ್ಯ ಕಬ್ಬು(sugar cane) ಅಭಿವೃದ್ಧಿ ಆಯುಕ್ತರು 2025ರ ಫೆ.2 ಮತ್ತು 25ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಬೇಕು ಮತ್ತು ಪ್ರಕರಣ ಸಂಬಂಧ ತಮ್ಮ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಸರ್ಕಾರ ಹಾಗೂ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿ ನಿರಾಣಿ ಶುಗರ್ಸ್ ಲಿಮಿಟೆಡ್ ಕಾರ್ಯಕಾರಿ ನಿರ್ದೇಶಕ ಸಂಗಮೇಶ್ ನಿರಾಣಿ ಹೈಕೋರ್ಟ್ಗೆ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಅರ್ಜಿದಾರರ ಸಂಸ್ಥೆಗೆ ರೈತರು ಕಬ್ಬು ಮಾರಾಟ ಮಾಡಿದ್ದಾರೆ. ಅದಕ್ಕಾಗಿ ಆ ಕಬ್ಬಿನಿಂದ ಉತ್ಪಾದಿಸಿರುವ ಸಕ್ಕರೆಯನ್ನು ಮಾರಾಟ ಮಾಡಿ ರೈತರಿಗೆ ಬಾಕಿ ಹಣ ಪಾವತಿಸಬೇಕು. ಈ ಕುರಿತು ಮುಚ್ಚಳಿಕೆ ನೀಡಿ ಏ.7ರಂದು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರಾಣಿ ಶುಗರ್ಸ್ ಲಿಮಿಟೆಡ್ಗೆ ಸೂಚಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಬ್ಬಿನಿಂದ ಸಕ್ಕರೆ(sugar), ಎಥೆನಾಲ್(ethanol), ವಿದ್ಯುತ್(electricity) ಉತ್ಪಾದಿಸಲಾಗಿದೆ. ವಿದ್ಯುತ್ ಅನ್ನು ಎಸ್ಕಾಂಗೆ(escom) ಮಾರಾಟ ಮಾಡಲಾಗಿದೆ. ಆದರೆ, ಈವರೆಗೂ ಎಸ್ಕಾಂ ಹಣ ಬಿಡುಗಡೆ ಮಾಡಿಲ್ಲ. ಇನ್ನೂ ನಿತ್ಯ ಅಗತ್ಯ ವಸ್ತುಗಳ ಕಾಯ್ದೆಯಡಿ ಸಕ್ಕರೆ ಮಾರಾಟ ಮಾಡಲು ಅರ್ಜಿದಾರರಿಗೆ ನಿರ್ಬಂಧ ಇದೆ. ಇದರಿಂದ ರೈತರಿಗೆ ಬಾಕಿ ಹಣ ಪಾವತಿಸಲು ವಿಳಂಬವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಪ್ರಮಾಣ ಪತ್ರ ಸಲ್ಲಿಸಲು ಅರ್ಜಿದಾರರಿಗೆ ಸೂಚಿಸಿ ಸೋಮವಾರಕ್ಕೆ ವಿಚಾರಣೆ ಮುಂದೂಡಿತು.