image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನ ʻಕಾವೇರಿ ಹಾಸ್ಪಿಟಲ್ಸ್‌ʼ ನಿಂದ ಕರ್ನಾಟಕದ 100 ರೈತರಿಗೆ ಉಚಿತ ರೊಬೊಟಿಕ್‌ ಮೊಣಕಾಲು ಕೀಲು ಕಸಿ ಶಸ್ತ್ರಚಿಕಿತ್ಸೆ

ಬೆಂಗಳೂರಿನ ʻಕಾವೇರಿ ಹಾಸ್ಪಿಟಲ್ಸ್‌ʼ ನಿಂದ ಕರ್ನಾಟಕದ 100 ರೈತರಿಗೆ ಉಚಿತ ರೊಬೊಟಿಕ್‌ ಮೊಣಕಾಲು ಕೀಲು ಕಸಿ ಶಸ್ತ್ರಚಿಕಿತ್ಸೆ

ಬೆಂಗಳೂರು: ಬೆಂಗಳೂರಿನ ʻಕಾವೇರಿ ಹಾಸ್ಪಿಟಲ್ಸ್‌ʼ ಕರ್ನಾಟಕದ 100 ರೈತರಿಗೆ ಉಚಿತ ರೊಬೊಟಿಕ್‌ ಮೊಣಕಾಲು ಕೀಲು ಕಸಿ ಶಸ್ತ್ರಚಿಕಿತ್ಸೆ ಒದಗಿಸುವ ಗುರಿಯೊಂದಿಗೆ ತನ್ನ ಮಹತ್ವಾಕಾಂಕ್ಷೆಯ ಉಪಕ್ರಮ 'ಕಾವೇರಿ ಸಂಕಲ್ಪ' ಪ್ರಾರಂಭಿಸುವುದಾಗಿ  ಪ್ರಕಟಿಸಿದೆ.

ಕಾವೇರಿ ಹಾಸ್ಪಿಟಲ್ಸ್‌ನ ಬೆಂಗಳೂರು ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ವಿಜಯಭಾಸ್ಕರನ್ ಹಾಗೂ ಹಾಸ್ಪಿಟಲ್ಸ್‌ ಎಲೆಕ್ಟ್ರಾನಿಕ್ ಸಿಟಿ ಮತ್ತು ಮಾರತ್ತಹಳ್ಳಿ ಘಟಕಗಳ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉಪಕ್ರಮಕ್ಕೆ ಔಪಚಾರಿಕ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, "ಖಾಸಗಿ ಆಸ್ಪತ್ರೆ ಈ ರೀತಿಯಾಗಿ ಸಿಎಸ್ಆರ್ ಹಣ ಬಳಸುತ್ತಿರುವುದು ಸಂತೋಷ ತಂದಿದೆ. ರೈತರು ನಮ್ಮ ಆರ್ಥಿಕತೆಯ ಅಡಿಪಾಯ. ಆದರೂ ಅವರ ಆರೋಗ್ಯವನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಕಾವೇರಿ ಸಂಕಲ್ಪದಂತಹ ಉಪಕ್ರಮಗಳು ನಮ್ಮೆಲ್ಲರ ಬೆಂಬಲಕ್ಕೆ ಅರ್ಹವಾಗಿವೆ. ಇಂತಹ ಕಾರ್ಯಕ್ರಮಗಳು ನಿರ್ಣಾಯಕ ಆರೋಗ್ಯ ಅಂತರಗಳನ್ನು ಪರಿಹರಿಸುವುದಲ್ಲದೆ, ನಮ್ಮ ರೈತ ಸಮುದಾಯವನ್ನು ಅವರ ದೈಹಿಕ ಶಕ್ತಿ ಮತ್ತು ಘನತೆಯನ್ನು ಪುನಃಸ್ಥಾಪಿಸುವ ಮೂಲಕ ಸಬಲೀಕರಣಗೊಳಿಸುತ್ತವೆ" ಎಂದು ಹೇಳಿದರು.

ಕಾವೇರಿ ಹಾಸ್ಪಿಟಲ್ಸ್‌ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ವಿಜಯಭಾಸ್ಕರನ್ ಮಾತನಾಡಿ, ಕಾವೇರಿ ಸಂಕಲ್ಪದ ಹಿಂದಿನ ತಮ್ಮ ವೈಯಕ್ತಿಕ ಪ್ರೇರಣೆಯನ್ನು ಹಂಚಿಕೊಂಡರು. "ಕೃಷಿ ಎಂಜಿನಿಯರ್, ಪ್ರಾಧ್ಯಾಪಕ ಮತ್ತು ಸಂಶೋಧಕನಾಗಿ ಸುಮಾರು ಎರಡು ದಶಕಗಳನ್ನು ಕಳೆದಿರುವ ನಾನು ನಮ್ಮ ರೈತರಿಗೆ ಆಗುವ ದೈಹಿಕ ಹಾನಿಯನ್ನು ನೇರವಾಗಿ ನೋಡಿದ್ದೇನೆ. ಆರಂಭದಲ್ಲೇ ಚಿಕಿತ್ಸೆ ನೀಡಿದ್ದಾದರೆ ಅಸ್ಥಿಸಂಧಿವಾತವನ್ನು ಹೆಚ್ಚಿನ ಕೊಯ್ಯವಿಕೆ ಚಿಕಿತ್ಸಾವಿಧಾನಗಳ ಅಗತ್ಯವಿಲ್ಲದೆಯೇ ನಿರ್ವಹಿಸಬಹುದು" ಎಂದರು.

"ಆದರೆ, ಸೀಮಿತ ಜಾಗೃತಿ ಮತ್ತು ಸೌಲಭ್ಯಗಳ ಅಲಭ್ಯತೆಯಿಂದಾಗಿ, ರೈತರು ಬಹುತೇಕ ಸಂದರ್ಭಗಳಲ್ಲಿ ಈ ಚಿಕಿತ್ಸೆಯನ್ನು ವಿಳಂಬಗೊಳಿಸುತ್ತಾರೆ ಮತ್ತು ಆ ಮೂಲಕ ಕೀಲು ಕಸಿ ಅನಿವಾರ್ಯ ಎಂಬ ಹಂತವನ್ನು ತಲುಪುತ್ತಾರೆ. ʻಕಾವೇರಿ ಸಂಕಲ್ಪʼ ಕಾರ್ಯಕ್ರಮವು ನನ್ನ ಅನುಭವ ಹಾಗೂ ರೈತ ಸಮುದಾಯಕ್ಕೆ ಚಲನಶೀಲತೆಯನ್ನು ಪುನಃಸ್ಥಾಪಿಸುವ ಮೂಲಕ ಹಾಗೂ ಅವರು ಸಕ್ರಿಯ ಕೃಷಿಗೆ ಮರಳಲು ಸಹಾಯ ಮಾಡುವ ಮೂಲಕ ಅವರಿಂದ ಪಡೆದದ್ದನ್ನು ಹಿಂದಿರುಗಿಸಬೇಕೆಂಬ ನನ್ನ ಆಶಯದಿಂದ ಸ್ಫೂರ್ತಿ ಪಡೆದಿದೆ. ಈ ಉಪಕ್ರಮವು ಕೇವಲ ವೈದ್ಯಕೀಯ ಮಧ್ಯಸ್ಥಿಕೆಗಿಂತಲೂ ಮಿಗಿಲಾದದ್ದು. ಇದು ವಿಶ್ವದರ್ಜೆಯ ಆರೋಗ್ಯ ಆರೈಕೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ʻಕಾವೇರಿ ಹಾಸ್ಪಿಟಲ್ಸ್‌ʼನ ಬದ್ಧತೆಯನ್ನು ಪ್ರತಿನಿಧಿಸುತ್ತದೆ" ಎಂದು ತಿಳಿಸಿದರು.

ಕಾವೇರಿ ಹಾಸ್ಪಿಟಲ್ಸ್‌ನ ಎಲೆಕ್ಟ್ರಾನಿಕ್​ ಸಿಟಿ ಮತ್ತು ಮಾರತ್ತಹಳ್ಳಿ ಘಟಕಗಳಲ್ಲಿನ ಮೂಳೆ ವಿಭಾಗಗಳು ರೊಬೊಟಿಕ್​​ ನೆರವಿನ ಕೀಲು ಕಸಿ ಶಸ್ತ್ರಚಿಕಿತ್ಸೆಗಳಲ್ಲಿ ಶ್ರೇಷ್ಠತೆಯ ದಾಖಲೆಯನ್ನು ಹೊಂದಿವೆ. ಅತ್ಯಾಧುನಿಕ ರೊಬೊಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳೊಂದಿಗೆ, ರೋಗಿಗಳು ನಿಖರವಾದ ಶಸ್ತ್ರಚಿಕಿತ್ಸೆ, ಕನಿಷ್ಠ ನೋವು, ವೇಗದ ಚೇತರಿಕೆ, ಕ್ಷಿಪ್ರ ಪೂರ್ವ ಸಿದ್ಧತೆ ಮತ್ತು ಸ್ವಾಭಾವಿಕವೆಂಬಂತೆ ಭಾಸವಾಗುವ ಕೀಲುಗಳ ಅನುಭವ ಪಡೆಯುತ್ತಾರೆ.

Category
ಕರಾವಳಿ ತರಂಗಿಣಿ