ಬೆಂಗಳೂರು: ಕೇಂದ್ರ ಸರ್ಕಾರದ ಗುಜರಿ ನೀತಿಯಡಿ 15 ವರ್ಷಕ್ಕೂ ಹಳೆಯದಾದ ವಾಹನಗಳಿಗೆ ಮುಕ್ತಿ ಕೊಡಲು ರಾಜ್ಯ ಅಗ್ನಿಶಾಮಕ ಇಲಾಖೆಯು ಮುಂದಾಗಿದ್ದು, ಈ ಮೂಲಕ ತನ್ನಲ್ಲಿರುವ ಹಳೆಯ ವಾಹನಗಳನ್ನು ಸ್ಕ್ರಾಪ್ಗೆ ಹಾಕಿ ಹೊಸ ವಾಹನಗಳನ್ನು ಖರೀದಿಸಿ ರಸ್ತೆಗಿಳಿಸಲು ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಬೇಸಿಗೆ ಕಾಲಿಡುವ ಮುನ್ನವೇ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆಗೆ ತೊಡಗಿಸಿಕೊಳ್ಳುವ ಅಗ್ನಿಶಾಮಕ ವಾಹನಗಳು ಹಳೆಯದಾಗಿವೆ. ಈ ವಾಹನಗಳು ಚಾಲನೆ ಸ್ಥಿತಿಯಲ್ಲಿದ್ದರೂ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಹಂತ - ಹಂತವಾಗಿ ಕ್ಷೀಣಿಸುತ್ತಿವೆ. ಅಲ್ಲದೇ, ಕೇಂದ್ರದ ಗುಜರಿ ನೀತಿಯು ಇದಕ್ಕೆ ಅಡ್ಡಿಯಾಗಿದೆ. ಹೀಗಾಗಿ 15 ವರ್ಷ ಮೇಲ್ಪಟ್ಟ ಹಳೆಯ ಅಗ್ನಿಶಾಮಕ ಸೇರಿದಂತೆ ಇನ್ನಿತರ ಅಗ್ನಿನಂದಕ ವಾಹನಗಳು ನೇಪಥ್ಯಕ್ಕೆ ಸರಿಯಲಿವೆ.
ರಾಜ್ಯದಲ್ಲಿ ಒಟ್ಟು 219 ಅಗ್ನಿಶಾಮಕ ಠಾಣೆಗಳಿದ್ದು, ಈ ಪೈಕಿ 19 ಠಾಣೆಗಳು ಬೆಂಗಳೂರು ನಗರದಲ್ಲಿವೆ. 25 ಸಾವಿರ ಲೀಟರ್ನಿಂದ 1 ಲಕ್ಷ ಲೀಟರ್ ನೀರು ತುಂಬುವ ಸಾಮರ್ಥ್ಯದ ಅಗ್ನಿಶಾಮಕ ವಾಹನಗಳಿವೆ. ರಾಜಧಾನಿ ಸೇರಿದಂತೆ ಸರಣಿ ಅಗ್ನಿ ಅವಘಡಗಳು ನಡೆದಾಗ ತುರ್ತಾಗಿ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುವ ಜವಾಬ್ದಾರಿ ಇಲಾಖೆಯದ್ದಾಗಿದೆ.
ಹೀಗಾಗಿ ಕೆ. ಸೇಫ್ ಯೋಜನೆಯಡಿ ಸರ್ಕಾರವು 100 ಅಗ್ನಿಶಾಮಕ ವಾಹನಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದೆ. 100 ವಾಹನಗಳ ಖರೀದಿಗೆ ಇಲಾಖೆಯು ಕಾರ್ಯಾದೇಶ ನೀಡಿದ್ದು, ಇನ್ನೂ ಆರು ತಿಂಗಳಲ್ಲಿ ಹೊಸ ಅಗ್ನಿನಂದಕ ವಾಹನಗಳು ರಸ್ತೆಗಿಳಿಯಲಿವೆ.
ಕೇಂದ್ರದ 15ನೇ ಹಣಕಾಸು ಆಯೋಗದಡಿ 84 ವಾಹನಗಳ ಖರೀದಿಗೆ ಅಸ್ತು ಎಂದಿದ್ದು, ಇದು ಕೂಡ ಕೆಲವೇ ತಿಂಗಳಲ್ಲಿ ಇಲಾಖೆಗೆ ಸೇರ್ಪಡೆಯಾಗಲಿವೆ. ಈ ಮೂಲಕ ಒಟ್ಟು 184 ಹೊಸ ಅಗ್ನಿಶಾಮಕ ವಾಹನಗಳು ಬರಲಿದ್ದು, ಹಳೆಯ ವಾಹನಗಳ ಬದಲಾಗಿ ಪರ್ಯಾಯವಾಗಿ ಬಳಕೆಯಾಗಲಿದೆ