ಬೆಂಗಳೂರು: 2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಸೇರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಲಾಗಿರುವ ಕರ್ನಾಟಕ ರಾಜ್ಯದ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಅನುಸರಿಸುತ್ತಿರುವ ತಾರತಮ್ಯ ಧೋರಣೆ ಜಗಜ್ಜಾಹೀರಾಗಿದೆ. ನಮ್ಮ ಒಕ್ಕೂಟ ವ್ಯವಸ್ಥೆಯು ಬಲಿಷ್ಠವಾಗಿರಬೇಕೆಂದರೆ ಕೇಂದ್ರ ಸರ್ಕಾರವು ತಾರತಮ್ಯರಹಿತ, ನ್ಯಾಯಸಮ್ಮತ, ಪಾರದರ್ಶಕ ನೀತಿಯನ್ನು ತನ್ನದಾಗಿಸಿಕೊಳ್ಳಬೇಕು. ರಾಜ್ಯಗಳನ್ನು ಸಂಪನ್ಮೂಲ ಸಂಗ್ರಹಣೆ ಮಾಡುವ ಘಟಕಗಳೆಂದು ನೋಡದೇ, ಅವುಗಳ ಕಷ್ಟನಷ್ಟಗಳಿಗೆ ಮಾನವೀಯವಾಗಿ ಸ್ಪಂದಿಸಬೇಕು ಎಂದಿದ್ದಾರೆ.
ತೆರಿಗೆ ಪಾಲಿನ ಹಂಚಿಕೆಯೂ ಸೇರಿದಂತೆ ರಾಜ್ಯಗಳಿಗೆ ಸಂಪನ್ಮೂಲ ಹಂಚಿಕೆ ಮಾಡುವ ವಿಷಯದಲ್ಲಿ ವೈಜ್ಞಾನಿಕವಾದ ಮಾನದಂಡಗಳನ್ನು ಅನುಸರಿಸಬೇಕು. ವಿಶೇಷವಾಗಿ, ಕರ್ನಾಟಕವೂ ಸೇರಿದಂತೆ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳ ಆದ್ಯತೆಗಳನ್ನು ಗುರುತಿಸಿ ಸಂಪನ್ಮೂಲ ಹಂಚಿಕೆಯ ವಿಚಾರದಲ್ಲಿ ಅವುಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕು. ಅವುಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನಿರಂತರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಲು ಮುಂದಾಗಬೇಕೆಂದು ನಮ್ಮ ಸರ್ಕಾರ ಒತ್ತಾಯಿಸುತ್ತಲೇ ಬಂದಿದೆ. ಇದೇ ಫೆಬ್ರವರಿ 2ರಂದು ಕೇಂದ್ರ ಹಣಕಾಸು ಸಚಿವರು 2025-26ನೇ ಸಾಲಿನ ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ ಅದರಲ್ಲಿ ಸೇರಿಸಬೇಕಾಗಿರುವ ರಾಜ್ಯದ ಬೇಡಿಕೆಗಳ ಪಟ್ಟಿಯನ್ನು ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.