ಬೆಂಗಳೂರು: ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರಲಿಲ್ಲ ಎಂಬ ಏಕೈಕ ಕಾರಣ ನೀಡಿ ಆರೋಗ್ಯ ವಿಮಾ ಪರಿಹಾರವನ್ನು ತಿರಸ್ಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ತೀರ್ಪು ನೀಡಿದೆ. ಪಾಲಿಸಿಯ ವ್ಯಾಪ್ತಿಯಲ್ಲಿ ಬರುವ ಕಾಯಿಲೊಂದಕ್ಕೆ ನಿರಂತರವಾಗಿ ಪಡೆಯುವ ಚಿಕಿತ್ಸೆಯ ಭಾಗವಾಗಿ ಇಂಜೆಕ್ಷನ್ ಅಥವಾ ಇತರ ವಿಧಾನಗಳನ್ನು ನೀಡಿದ್ದರೆ, ಅಂತಹ ವೆಚ್ಚಗಳನ್ನು ವಿಮಾ ಕಂಪನಿಗಳು ಕಡ್ಡಾಯವಾಗಿ ಭರಿಸಲೇಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ನಾಲ್ಕನೇ ಹಂತದ ಪ್ರಾಸ್ಟೇಟ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪದ್ಮನಾಭ ಶೆಟ್ಟಿ ಎಂಬುವವರಿಗೆ ನೀಡಲಾದ ₹2,85,470 ಮೌಲ್ಯದ ಇಂಜೆಕ್ಷನ್ಗಳ ವೆಚ್ಚವನ್ನು ಮರುಪಾವತಿಸುವಂತೆ ಮಂಗಳೂರಿನ ಶಾಶ್ವತ ಲೋಕ ಅದಾಲತ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ 'ನ್ಯಾಷನಲ್ ಇನ್ಶೂರೆನ್ಸ್ ಕಂಪನಿ'ಯು ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಮಾ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಆಸ್ಪತ್ರೆಗೆ ದಾಖಲಾಗುವುದು ಎಂಬುದು ಚಿಕಿತ್ಸೆ ನೀಡುವ ಒಂದು ಮಾರ್ಗವಷ್ಟೇ ಹೊರತು, ಅದೇ ಚಿಕಿತ್ಸೆಯ ಅಂತಿಮ ಗುರಿಯಲ್ಲ ಎಂದು ಮಾರ್ಮಿಕವಾಗಿ ನುಡಿದಿದೆ. ವೈದ್ಯಕೀಯ ತಂತ್ರಜ್ಞಾನ ಮುಂದುವರಿದಂತೆ ಹಿಂದೆ ಆಸ್ಪತ್ರೆಗೆ ದಾಖಲಾಗಿ ಪಡೆಯಬೇಕಿದ್ದ ಚಿಕಿತ್ಸೆಗಳು ಇಂದು ದಾಖಲಾಗದೆಯೇ ನೀಡುವ ಮಟ್ಟಕ್ಕೆ ಬೆಳೆದಿವೆ. ಹೀಗಾಗಿ ಕೇವಲ ಆಸ್ಪತ್ರೆಗೆ ದಾಖಲಾಗಿಲ್ಲ ಎಂಬ ತಾಂತ್ರಿಕ ಕಾರಣಕ್ಕೆ ಅದು ಪಾಲಿಸಿಯಡಿ ಬರುವುದಿಲ್ಲ ಎಂದು ಹೇಳಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬ್ಯಾಂಕ್ ನಿವೃತ್ತ ನೌಕರರ ಆರೋಗ್ಯ ವಿಮಾ ಯೋಜನೆಯಡಿ ವಾರ್ಷಿಕ ₹9 ಲಕ್ಷ ರಕ್ಷಣೆ ಹೊಂದಿದ್ದ ರೋಗಿಯು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೀಮೋಥೆರಪಿ ಪಡೆದುಕೊಂಡಿದ್ದರು. ಆಸ್ಪತ್ರೆಯಲ್ಲಿದ್ದಾಗಿನ ಎಲ್ಲಾ ವೆಚ್ಚಗಳನ್ನು ನೀಡಿದ್ದ ಕಂಪನಿಯು, ನಂತರ ವೈದ್ಯರ ಸಲಹೆಯಂತೆ ಮೂರು ತಿಂಗಳಿಗೊಮ್ಮೆ ನೀಡಬೇಕಾಗಿದ್ದ ಜೀವ ರಕ್ಷಕ ಇಂಜೆಕ್ಷನ್ಗಳ ವೆಚ್ಚವನ್ನು ಹೊರರೋಗಿ ಚಿಕಿತ್ಸೆ ಎಂಬ ನೆಪವೊಡ್ಡಿ ತಿರಸ್ಕರಿಸಿತ್ತು. ಇದನ್ನು ಹೈಕೋರ್ಟ್ ತೀವ್ರವಾಗಿ ಆಕ್ಷೇಪಿಸಿದೆ.
ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯ ನಿರಂತರ ಆರೈಕೆಯ ಭಾಗವಾಗಿ ವೈದ್ಯರು ಈ ಇಂಜೆಕ್ಷನ್ಗಳನ್ನು ಶಿಫಾರಸು ಮಾಡಿದ್ದಾರೆ ಎಂಬುದು ಸಾಬೀತಾಗಿರುವಾಗ ಅದನ್ನು ನಿರಾಕರಿಸುವುದು ತಪ್ಪು ಎಂದು ತಿಳಿಸಿದ ನ್ಯಾಯಾಲಯ, ಬಡ್ಡಿ ಸಮೇತ ಹಣ ಮರುಪಾವತಿ ಮಾಡುವಂತೆ ಆದೇಶಿಸಿದೆ. ಜತೆಗೆ ಅರ್ಜಿದಾರ ವಿಮಾ ಕಂಪನಿಗೆ ₹50,000 ದಂಡ ವಿಧಿಸಿದೆ. ಈ ತೀರ್ಪು ದೇಶಾದ್ಯಂತ ಆಸ್ಪತ್ರೆಗೆ ದಾಖಲಾಗದೆ ಚುಚ್ಚುಮದ್ದು ಮತ್ತಿತರ ನಿರಂತರ ಚಿಕಿತ್ಸೆ ಪಡೆಯುತ್ತಿರುವ ಲಕ್ಷಾಂತರ ವಿಮಾದಾರರಿಗೆ ಭಾರಿ ನೆಮ್ಮದಿ ತಂದಿದೆ.