ಚಿಕ್ಕಮಗಳೂರು : ರಾಜ್ಯ ಸರ್ಕಾರ ನೀಡಿರುವ ಗುಟ್ಕಾ ಹಾಗೂ ಅಡಿಕೆ ನಿಷೇಧದ ಪ್ರಸ್ತಾಪದ ಹೇಳಿಕೆಯಿಂದಾಗಿ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಸರ್ಕಾರ ತಕ್ಷಣವೇ ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ವಿಧಾನ ಪರಿಷತ್ ಶಾಸಕ ಡಾ. ಸಿ.ಟಿ. ರವಿ ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಸಖರಾಯಪಟ್ಟಣದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಹಾಗೂ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಸರ್ಕಾರದ ರೈತವಿರೋಧಿ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಅಡಿಕೆ ಬೆಲೆ ಕ್ವಿಂಟಾಲ್ಗೆ ₹60,000 ರಿಂದ ₹65,000 ಏರಿಕೆಯಾಗುವ ನಿರೀಕ್ಷೆಯಿದ್ದ ಸಂದರ್ಭದಲ್ಲಿ, ಸರ್ಕಾರದ ಒಂದು ಬೇಜವಾಬ್ದಾರಿ ಹೇಳಿಕೆಯಿಂದ ಬೆಲೆ ದಿಢೀರನೆ ₹5,000 ರಿಂದ ₹6,000 ದಷ್ಟು ಕುಸಿದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಬಳಿಕ ಇದ್ದಕ್ಕಿದ್ದಂತೆ ಗುಟ್ಕಾ ನಿಷೇಧದ ಪ್ರಸ್ತಾಪ ತಂದಿರುವುದರ ಹಿಂದ ಯಾರ ಲಾಭವಿದೆ ಎಂಬುದನ್ನು ಉತ್ತರಿಸಬೇಕು. ಯಾವುದೇ ಬಂಡವಾಳ ಹೂಡದೆ ಕೇವಲ ಹೇಳಿಕೆಗಳಿಂದ ಲಕ್ಷಾಂತರ ರೈತರ ಬದುಕಿನ ಮೇಲೆ ಹೊಡೆತ ಬೀಳುತ್ತಿದ್ದು, ಗುಟ್ಕಾ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನೀತಿಗಳನ್ನು ಕೈಬಿಡಬೇಕು ಎಂದು ಎಚ್ಚರಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಕೆರೆ-ಬೋರ್ವೆಲ್ಗಳು ಬತ್ತುತ್ತಿದ್ದು, ಜೋಳ, ಸೂರ್ಯಕಾಂತಿ ಹಾಗೂ ಅಡಿಕೆ ತೋಟಗಳು ಒಣಗಿ ನಿಂತಿವೆ. ಈ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಎಂದು ಘೋಷಿಸಿ ಬರ ಪರಿಹಾರ ಕಾರ್ಯಗಳನ್ನು ಆರಂಭಿಸಬೇಕು. ವಿದ್ಯುತ್ ಅಭಾವ ಹಾಗೂ ಲೋಡ್ಶೆಡ್ಡಿಂಗ್ನಿಂದ ರೈತರು ಕಷ್ಟಪಡುತ್ತಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ₹20,000 ಕ್ಕೆ ಸಿಗುತ್ತಿದ್ದ ಟ್ರಾನ್ಸ್ಫಾರ್ಮರ್ಗಳಿಗೆ ಈಗ ₹3 ಲಕ್ಷ ಪಾವತಿಸಿದರೂ ವಿಳಂಬವಾಗುತ್ತಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿದ್ದ ₹1,281 ಕೋಟಿ ಮೊತ್ತದ ನೀರಾವರಿ ಯೋಜನೆಯನ್ನು ಸರ್ಕಾರ ಮುಂದಿನ 6 ತಿಂಗಳೊಳಗೆ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಬೇಕು. ಜಿಲ್ಲೆಯ ಮೆಡಿಕಲ್ ಕಾಲೇಜು, ನ್ಯಾಯಾಲಯ ಸಂಕೀರ್ಣ, ಡಿಸಿ ಕಾಂಪ್ಲೆಕ್ಸ್ ಸೇರಿದಂತೆ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಹಾಗೂ ಬಡ ಫಲಾನುಭವಿಗಳಿಗೆ ಹಲವು ತಿಂಗಳಿಂದ ಬಾಕಿ ಇರುವ ಧನಸಹಾಯವನ್ನು ಗೌರಿ-ಗಣೇಶ ಹಬ್ಬದ ಒಳಗಾಗಿ ಬಿಡುಗಡೆ ಮಾಡಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದರು.