ಸುರತ್ಕಲ್ : ಸಂಸತ್ ಭವನದ ಮುಂದೆ ರಾಹುಲ್ ಗಾಂಧಿ ಸನಾತನ ಹಿಂದೂ ಧರ್ಮಕ್ಕೆ ನೇರ ಅವಮಾನ ಮಾಡಿದ್ದಾರೆ. ಸನಾತನ ಹಿಂದೂಗಳ ಸಹನೆ ಪರೀಕ್ಷಿಸುತ್ತಿರುವ ರಾಹುಲ್ ಗಾಂಧಿಯನ್ನು ಮುಂದಿನ ದಿನಗಳಲ್ಲಿ ಸನಾತನಿಗಳೇ ರಸ್ತೆಗೆ ಇಳಿಸಿ ಭಿಕ್ಷೆ ಬೇಡುವ ಸ್ಥಿತಿಗೆ ತರುತ್ತಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕೆ ಹೇಳಿಕೆ ನೀಡಿರುವ ಅವರು ರಾಹುಲ್ ಗಾಂಧಿ ಹಾಗೂ ಅವರ ತಂಡ ಹಿಂದೂ ಧರ್ಮದ ಪವಿತ್ರ ಕಾವಿ ವಸ್ತ್ರವನ್ನು ಅಪಮಾನಿಸುವ ರೀತಿಯಲ್ಲಿ ವೇಷ ಧರಿಸಿ ನಾಟಕವಾಡಿದ್ದಲ್ಲದೆ, ರಾಮ ಮಂದಿರಕ್ಕೆ ಹಣ ಹಾಕುವಂತೆ ನಟಿಸಿ ಕೋಟ್ಯಂತರ ಹಿಂದೂಗಳ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು. ರಾಮ ಮಂದಿರ ನಿರ್ಮಾಣಕ್ಕೆ ಹಂತ ಹಂತವಾಗಿ ಅಡ್ಡಿ ಆತಂಕ ಸೃಷ್ಟಿಸಿದ ಕಾಂಗ್ರೆಸ್, ಈಗ ಮಂದಿರ ನಿರ್ಮಾಣವಾದ ಬಳಿಕ ಅದನ್ನು ಸಹಿಸದೆ ತೇಜೋವಧೆಗೆ ಇಳಿದಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಸಾವಿರ ವರ್ಷ ಕಳೆದರೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರಲಿಲ್ಲ. ಹಿಂದೂ ವಿರೋಧಿ ಮನಸ್ಥಿತಿಯೇ ಕಾಂಗ್ರೆಸ್ನ ರಕ್ತದಲ್ಲಿ ಇದೆ ಎಂದು ಟೀಕಿಸಿದ್ದಾರೆ.