ಮಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಸರ್ಕಾರವು ಪುತ್ತೂರು ಮತ್ತು ಬಂಟ್ವಾಳದ ಪ್ರಕರಣಗಳಲ್ಲಿ ಅನುಸರಿಸುತ್ತಿರುವ ದ್ವಂದ್ವ ನೀತಿಯು ಜನರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಕಿಡಿಕಾರಿದ್ದಾರೆ. ಪುತ್ತೂರಿನಲ್ಲಿ ಯುವತಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯ ನಂತರ ಸಾಮಾಜಿಕ ಗೊಂದಲ ಸೃಷ್ಟಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಹಲವರ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸುವ ಸರ್ಕಾರ, ಬಂಟ್ವಾಳದಲ್ಲಿ ನಡೆದ ಯುವತಿಯ ಬರ್ಬರ ಹತ್ಯೆಯ ಬಳಿಕ ಆರೋಪಿಗಳನ್ನು ಹಿಂದೂ ಸಂಘಟನೆಗಳೊಂದಿಗೆ ತಳಕು ಹಾಕಿ ಬಿಂಬಿಸುತ್ತಿರುವವರ ವಿರುದ್ಧ ಮೌನ ವಹಿಸಿರುವುದು ಅಕ್ಷಮ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳದ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ವೈಷಮ್ಯವನ್ನು ಬಿತ್ತುವಂತಹ ಸಂದೇಶಗಳು ಹರಿದಾಡುತ್ತಿದ್ದರೂ, ಸರ್ಕಾರ ಮತ್ತು ಗೃಹ ಸಚಿವರು ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿರುವುದು ಖಂಡನೀಯವಾಗಿದೆ ಎಂದು ಅವರು ಟೀಕಿಸಿದ್ದಾರೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಹೆಣ್ಣುಮಕ್ಕಳು ಮತ್ತು ಸಾಮಾನ್ಯ ನಾಗರಿಕರು ರಸ್ತೆಗಳಲ್ಲಿ ನಿರ್ಭಯವಾಗಿ ಓಡಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾನೂನು ಪಾಲನೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಡಾ. ಭರತ್ ಶೆಟ್ಟಿ ಆರೋಪಿಸಿದ್ದಾರೆ.