image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿಕೆಶಿ ಸಂಪುಟದಿಂದ ಜಮೀರ್ ಅಹ್ಮದ್ ಖಾನ್ ಹೊರಕ್ಕೆ: ಕೋಡಿಮಠದ ಶ್ರೀಗಳ ಭವಿಷ್ಯ ಹಾಗೂ ಮುಸ್ಲಿಂ ವಲಯದಲ್ಲಿ ತೀವ್ರ ಅಸಮಾಧಾನ

ಡಿಕೆಶಿ ಸಂಪುಟದಿಂದ ಜಮೀರ್ ಅಹ್ಮದ್ ಖಾನ್ ಹೊರಕ್ಕೆ: ಕೋಡಿಮಠದ ಶ್ರೀಗಳ ಭವಿಷ್ಯ ಹಾಗೂ ಮುಸ್ಲಿಂ ವಲಯದಲ್ಲಿ ತೀವ್ರ ಅಸಮಾಧಾನ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೊಸ ಸಂಪುಟ ರಚನೆಯಾಗಿದ್ದು, ಒಟ್ಟು 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಈ ಹೊಸ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಈಗ ಕಾಂಗ್ರೆಸ್ ಪಕ್ಷದೊಳಗಿನ ಮುಸ್ಲಿಂ ವಲಯದಲ್ಲಿ ಭಾರಿ ಚರ್ಚೆಗೆ ಮತ್ತು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಜಮೀರ್ ಅವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಿರುವ ಕ್ರಮ ಎಂದು ಅವರ ಬೆಂಬಲಿಗರು ಹಾಗೂ ಅಲ್ಪಸಂಖ್ಯಾತ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆ, ಜಮೀರ್ ಅಹ್ಮದ್ ಖಾನ್ ಅವರ ಅನುಪಸ್ಥಿತಿಯ ಕುರಿತು ಭವಿಷ್ಯ ಖ್ಯಾತಿಯ ಕೋಡಿಮಠದ ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಜಮೀರ್ ಅಹ್ಮದ್ ಖಾನ್ ಅವರು ಇಲ್ಲದ ಸರ್ಕಾರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ, ಒಂದು ವೇಳೆ ಅವರು ಇಲ್ಲದಿದ್ದರೆ ಅದು ಸರ್ಕಾರವೇ ಅಲ್ಲ ಎಂದು ಸ್ವಾಮೀಜಿ ಮಾರ್ಮಿಕವಾಗಿ ನುಡಿದಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರ ಆಡಳಿತ ವೈಖರಿ ಮತ್ತು ಸಮಾಜದ ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಅವರ ಸೌಹಾರ್ದಯುತ ಗುಣವನ್ನು ಮಠಾಧೀಶರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಚಿವರು ಸದಾ ಜನರ ಮಧ್ಯೆ ಇದ್ದು ಕೆಲಸ ಮಾಡುವ ಅಪ್ಪಟ ಜನನಾಯಕ. ಇಂತಹ ಪ್ರತಿಯೊಬ್ಬರ ಕಷ್ಟಕ್ಕೂ ಸ್ಪಂದಿಸುವ ನಾಯಕರ ಉಪಸ್ಥಿತಿ ಇವತ್ತಿನ ಸರ್ಕಾರಕ್ಕೆ ಅತ್ಯಂತ ಅನಿವಾರ್ಯವಾಗಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಜಮೀರ್ ಅಹ್ಮದ್ ಖಾನ್ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ರಾಜ್ಯದ ಮುಸ್ಲಿಂ ಬೆಲ್ಟ್‌ಗಳಲ್ಲಿ ನಿರಂತರ ಪ್ರಚಾರ ನಡೆಸಿ ಪಕ್ಷದ ಪರವಾಗಿ ಅಲ್ಪಸಂಖ್ಯಾತ ಮತಗಳನ್ನು ಕ್ರೋಢೀಕರಿಸುವಲ್ಲಿ ಅವರು ಪ್ರಮುಖ ಶಕ್ತಿಯಾಗಿದ್ದರು. ಆದರೆ ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಅವರ ನಡೆ ಹಾಗೂ ಪಕ್ಷ ವಿರೋಧಿ ಚಟುವಟಿಕೆಯ ಆರೋಪಗಳು ಅವರ ರಾಜಕೀಯ ಬೆಳವಣಿಗೆಗೆ ಭಾರಿ ಹಿನ್ನಡೆಯನ್ನು ಉಂಟುಮಾಡಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಜಮೀರ್ ತಮ್ಮ ಪ್ರಭಾವಿ ಸ್ಥಾನವನ್ನು ಕಳೆದುಕೊಳ್ಳುವಂತಾಗಿದೆ. ಸದ್ಯ ಕಾಂಗ್ರೆಸ್ ಹೈಕಮಾಂಡ್ ಜಮೀರ್ ಅವರ ಸ್ಥಾನಕ್ಕೆ ವಿಧಾನಸಭಾ ಮಾಜಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸಂಪುಟದಲ್ಲಿ ಎಂಟ್ರಿ ನೀಡಿದ್ದು, ಜಮೀರ್ ಅವರ ರಾಜಕೀಯ ಭವಿಷ್ಯ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Category
ಕರಾವಳಿ ತರಂಗಿಣಿ