ಕೋಲ್ಕತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಊಹಾಪೋಹಗಳು ತೀವ್ರವಾಗುತ್ತಿವೆ. ಈ ನಡುವೆ,''ಪಕ್ಷವು ಈ ವಿಷಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಅಭಿವೃದ್ಧಿ ಕಾರ್ಯಸೂಚಿಯ ಹೆಸರಿನಲ್ಲಿ ಮತಗಳನ್ನು ಕೇಳಲಿದೆ'' ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ರವಿವಾರ ಹೇಳಿಕೆ ನೀಡಿದ್ದಾರೆ. "ಟಿಎಂಸಿಯ ದುರಾಡಳಿತದ ವಿರುದ್ಧ ಜನರು ಹೋರಾಟಗಾರರೆಂದು ಗುರುತಿಸುವ ಯಾರೇ ಆಗಲಿ, ಅವರು ಚುನಾವಣೆಯಲ್ಲಿ ಗೆದ್ದ ನಂತರ ಪಕ್ಷದ ಮುಖವಾಗಬಹುದು" ಎಂದು ಭಟ್ಟಾಚಾರ್ಯ ಹೇಳಿದ್ದಾರೆ. ಈ ವಿಧಾನಸಭಾ ಚುನಾವಣೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿಯ ತುಷ್ಟೀಕರಣ ರಾಜಕೀಯದ ವಿರುದ್ಧ ಬಿಜೆಪಿಯ ನೇರ ಹೋರಾಟ ಎಂದು ಸಮಿಕ್ ಹೇಳಿದರು. ''ಅಧಿಕಾರಕ್ಕೆ ಬಂದರೆ ಒಳನುಸುಳುಕೋರರನ್ನು ಪತ್ತೆಹಚ್ಚುವುದು, ಬಂಧಿಸುವುದು ಮತ್ತು ಗಡೀಪಾರು ಮಾಡುವ ನೀತಿಯನ್ನು ಬಿಜೆಪಿ ಅನುಸರಿಸುತ್ತದೆ'' ಎಂದು ಹೇಳಿದರು.