ನವದೆಹಲಿ : 'ಮುಸ್ಲಿಮರಿಗೆ ಮೀಸಲಾತಿ ನೀಡಲೇಬೇಕು ಎಂಬ ಉದ್ದೇಶದಿಂದ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ತೆಲಂಗಾಣದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿಸಲಾಗಿದೆ. ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ' ಎಂದು ಬಿಜೆಪಿ ಸದಸ್ಯ ಕೆ.ಲಕ್ಷ್ಮಣ್ ರಾಜ್ಯಸಭೆಯಲ್ಲಿ ಹೇಳಿದರು. ಬಿಜೆಪಿಯ ಒಬಿಸಿ ಮೋರ್ಚಾ ಅಧ್ಯಕ್ಷರೂ ಆಗಿರುವ ಲಕ್ಷ್ಮಣ್ ಮಾತನಾಡಿ, 'ಈ ರಾಜ್ಯಗಳು ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ಕೇಂದ್ರ ಸರ್ಕಾರವು ಪರಿಶೀಲನೆ ನಡೆಸಿ ಆದೇಶವೊಂದನ್ನು ನೀಡಬೇಕು' ಎಂದರು. ಇವರ ಮಾತಿಗೆ ವಿರೋಧ ಪಕ್ಷಗಳ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮಾತನಾಡಲು ಅವಕಾಶ ನೀಡದ ಕಾರಣ ವಿಪಕ್ಷಗಳು ಸಭಾತ್ಯಾಗ ಮಾಡಿದವು. 'ಸಾಮಾಜಿಕವಾಗಿ ಶೈಕ್ಷಣಿಕವಾಗಿ ಒಬಿಸಿ ವರ್ಗದವರು ಹಿಂದುಳಿದಿದ್ದಾರೆ. ಅವರಿಗೆ ಸಲ್ಲಬೇಕಾದ ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಮಾಡಲಾಗುತ್ತಿದೆ' ಎಂದು ಆರೋಪಿಸಿದರು.
'ಕರ್ನಾಟಕದಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಒಂದು ಜಾತಿಯನ್ನಾಗಿ ಪರಿಗಣಿಸಲಾಗಿದೆ. ಮುಸ್ಲಿಮರು ಒಬಿಸಿ ಪಟ್ಟಿಯಲ್ಲೂ ಇಲ್ಲ. ಆದರೂ ಇವರಿಗಾಗಿಯೇ ಶೇ 4ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಶೇ 97ರಷ್ಟು ಮುಸ್ಲಿಂ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸಲಾಗಿದೆ' ಎಂದರು. 'ಇನ್ನು ತಮಿಳುನಾಡಿನಲ್ಲಿರುವ ಒಟ್ಟು ಮುಸ್ಲಿಮರ ಪೈಕಿ ಶೇ 95ರಷ್ಟು ಮಂದಿ ಒಬಿಸಿ ಪಟ್ಟಿಯಲ್ಲಿದ್ದಾರೆ. ಇವರಿಗೆ ಶೇ 3.5ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಕೇರಳದಲ್ಲಿ ಕೂಡ ಮುಸ್ಲಿಮರು ಒಬಿಸಿ ಪಟ್ಟಿಯಲ್ಲಿದ್ದಾರೆ. ಇವರ ಮೀಸಲಾತಿಯನ್ನು ಶೇ 3ರಿಂದ ಶೇ 12ಕ್ಕೆ ಏರಿಸಲಾಗಿದೆ' ಎಂದರು. 'ತೆಲಂಗಾಣದಲ್ಲಿ ಒಬಿಸಿ ಪಟ್ಟಿಯಲ್ಲಿ ಇಲ್ಲದ ಕೆಲವು ಮುಸ್ಲಿಂ ಸಮುದಾಯದವರನ್ನೂ ಸೇರಿಸಿ ಶೇ 4ರಷ್ಟು ಮೀಸಲಾತಿ ಘೋಷಿಸಲಾಗಿದೆ. ಈ ಆದೇಶವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹೈದರಾಬಾದ್ ನಗರಸಭೆ ಚುನಾವಣೆಯಲ್ಲಿ ಒಬಿಸಿಗಳಿಗೆ ದೊರೆಯಬೇಕಾದ ಶೇ 50ರಷ್ಟು ಮೀಸಲಾತಿಯನ್ನು ಮುಸ್ಲಿಮರು ಅನುಭವಿಸುತ್ತಿದ್ದಾರೆ' ಎಂದರು.