image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್‌ಸೆಲ್ವಂ ಆಡಳಿತಾರೂಢ ಡಿಎಂಕೆ (DMK) ಪಕ್ಷಕ್ಕೆ ಸೇರ್ಪಡೆ

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್‌ಸೆಲ್ವಂ ಆಡಳಿತಾರೂಢ ಡಿಎಂಕೆ (DMK) ಪಕ್ಷಕ್ಕೆ ಸೇರ್ಪಡೆ

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಅಲ್ಲಿನ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಬೆಳವಣಿಗೆ ನಡೆದಿದೆ. ಎಐಎಡಿಎಂಕೆಯ (AIADMK) ಮಾಜಿ ನಾಯಕ ಹಾಗೂ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್‌ಸೆಲ್ವಂ ಅವರು ಆಡಳಿತಾರೂಢ ಡಿಎಂಕೆ (DMK) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿ 'ಅಣ್ಣಾ ಅರಿವಾಲಯಂ'ನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಸಮ್ಮುಖದಲ್ಲಿ ಪನ್ನೀರ್‌ಸೆಲ್ವಂ ಶುಕ್ರವಾರ ಅಧಿಕೃತವಾಗಿ ಡಿಎಂಕೆ ಪಕ್ಷಕ್ಕೆ ಸೇರಿದರು. ಸುಮಾರು ಐದು ದಶಕಗಳ ಕಾಲ ಎಐಎಡಿಎಂಕೆಯಲ್ಲಿ ನಿಷ್ಠಾವಂತರಾಗಿದ್ದ ಪನ್ನೀರ್‌ಸೆಲ್ವಂ, ಜಯಲಲಿತಾ ಅವರ ನಂಬಿಕಸ್ತ ನಾಯಕ ಎನಿಸಿಕೊಂಡಿದ್ದರು. ಆದರೆ, ಪಕ್ಷದ ನಾಯಕತ್ವಕ್ಕಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ನಡೆದ ಸುದೀರ್ಘ ಹೋರಾಟದ ನಂತರ 2022ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಎಐಎಡಿಎಂಕೆಗೆ ಮರಳಿ ಸೇರಲು ಪನ್ನೀರ್‌ಸೆಲ್ವಂ ಹಲವು ಬಾರಿ ಪ್ರಯತ್ನ ನಡೆಸಿದ್ದರೂ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಪ್ರತಿ ಬಾರಿಯೂ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.

2025ರಲ್ಲಿ, ಬಿಜೆಪಿಯಿಂದ ತಮಗೆ "ಅವಮಾನ"ವಾಗಿದೆ ಎಂದು ಆರೋಪಿಸಿ ಪನ್ನೀರ್‌ಸೆಲ್ವಂ ಎನ್‌ಡಿಎ (NDA) ಮೈತ್ರಿಕೂಟದಿಂದ ಹೊರಬಂದಿದ್ದರು. ಎಐಎಡಿಎಂಕೆಯ ಪರಮ ವೈರಿ ಎಂದೇ ಪರಿಗಣಿಸಲಾಗುವ ಡಿಎಂಕೆ ಪಕ್ಷಕ್ಕೆ ಪನ್ನೀರ್‌ಸೆಲ್ವಂ ಸೇರಿರುವುದು ಈ ಬಾರಿಯ ಚುನಾವಣೆಯಲ್ಲಿ ಅನಿರೀಕ್ಷಿತ ತಿರುವು ನೀಡಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ನಿರ್ಧಾರವನ್ನು ನಾನು ಸ್ವತಃ ತೆಗೆದುಕೊಂಡಿದ್ದೇನೆ. ಎಐಎಡಿಎಂಕೆ (AIADMK) ನಾಯಕತ್ವದೊಂದಿಗೆ ಕಳೆದ ಕೆಲವು ವರ್ಷಗಳಿಂದ ಹೊಂದಿದ್ದ ಕಹಿ ಅನುಭವಗಳಿಗೆ ಪೂರ್ಣವಿರಾಮ ಹಾಕಲು ಈ ಹೆಜ್ಜೆ ಇಟ್ಟಿದ್ದಾಗಿ ಪನ್ನೀರ್‌ಸೆಲ್ವಂ ಸ್ಪಷ್ಟಪಡಿಸಿದ್ದಾರೆ. ಡಿಎಂಕೆ ಪಕ್ಷಕ್ಕೆ ಸೇರಿದ ನಂತರ ಓ. ಪನ್ನೀರ್‌ಸೆಲ್ವಂ ಅವರು ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಆಡಳಿತವನ್ನು ಶ್ಲಾಘಿಸಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಜನರಿಗೆ ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ ಮತ್ತು ಜನರು ಅದನ್ನು ಗಮನಿಸುತ್ತಿದ್ದಾರೆ. ಎಡಪ್ಪಾಡಿ ಪಳನಿಸ್ವಾಮಿ ಅವರು ದಕ್ಷಿಣ ತಮಿಳುನಾಡಿನ ಯಾವುದೇ ನಾಯಕರು ಪ್ರಬಲರಾಗದಂತೆ ತಡೆಯಲು ಉತ್ಸುಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ದ್ರಾವಿಡ ಚಳವಳಿ ಮತ್ತು ದ್ರಾವಿಡ ಸಿದ್ಧಾಂತವನ್ನು ಉಳಿಸಲು ಡಿಎಂಕೆ ಮಾತ್ರ ಶ್ರಮಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಾನು ಕೇವಲ ಒಬ್ಬ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇರಿದ್ದೇನೆ. ಪಕ್ಷದ ಇತರ ಕಾರ್ಯಕರ್ತರಂತೆ ಒಬ್ಬನಾಗಿ ನಾನು ಪಕ್ಷದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಪನ್ನೀರ್‌ಸೆಲ್ವಂ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ