ಚಾಮರಾಜನಗರ: "ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ ಅಷ್ಟೇ. ಇಲ್ಲಿಗೆ ಬಂದಾಗಲೆಲ್ಲ ನನ್ನ ಕುರ್ಚಿ ಗಟ್ಟಿಯಾಗಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
"ಚಾಮರಾಜನಗರಕ್ಕೆ ಭೇಟಿ ನೀಡಿದ್ರೆ ಅಧಿಕಾರ ಹೋಗುತ್ತದೆ ಎಂಬುದರಲ್ಲಿ ಯಾವುದೇ ಸತ್ಯವಿಲ್ಲ. ಈ ಮೌಢ್ಯಗಳಿಂದಲೇ ಸಮಾಜದಲ್ಲಿ ಪ್ರಗತಿಗೆ ಅಡ್ಡಿಯಾಗಿದೆ. ನಾನು ಮೊದಲ ಬಾರಿಗೆ ಸಿಎಂ ಆಗಿದ್ದಾಗ 15ಕ್ಕೂ ಹೆಚ್ಚು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದೆ" ಎಂದರು.
"ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಸಭೆಯಲ್ಲಿ ಹಲವು ಸುಧಾರಣಾ ಕ್ರಮಗಳಿಗೆ ಸೂಚನೆ ನೀಡಿದ್ದೇನೆ. ಶುಚಿತ್ವ, ಮದ್ಯ ನಿಷೇಧ, ತಿರುಪತಿ ರೀತಿಯಲ್ಲಿ ಲಾಡುಗಳನ್ನು ತಯಾರಿಸಿ ಕಡಿಮೆ ದರದಲ್ಲಿ ನೀಡಲು ತಿಳಿಸಿದ್ದೇನೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವಂತೆಯೂ ತಿಳಿಸಿದ್ದೇನೆ" ಎಂದು ಹೇಳಿದರು.
ವಿನಯ್ ಕುಲಕರ್ಣಿ ಅವರ ಮನೆ ಮೇಲೆ ಇ.ಡಿ. ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, "ಇದು ರಾಜಕೀಯಪ್ರೇರಿತ ದಾಳಿ. ಕೇಂದ್ರ ಸರ್ಕಾರದ ಒತ್ತಡದ ಮೇಲೆ ಇ.ಡಿ.ಯವರು ದಾಳಿ ಮಾಡಿದ್ದಾರೆ. ಬಿಜೆಪಿಯರ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ?. ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ" ಎಂದು ಆರೋಪಿಸಿದರು.
ಪಹಲ್ಗಾಮ್ ದಾಳಿ ಕುರಿತು ಪ್ರತಿಕ್ರಿಯಿಸಿ, "ಇದು ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ" ಎಂದು ದೂರಿದರು. ಸುತ್ತೂರು ಮಠದಲ್ಲಿ ಕಾಂಗ್ರೆಸ್ ಮುಖಂಡ ಈಶ್ವರ್ ಅವರ ಪುತ್ರ ಶಿವಶಂಕರಿ ಹಾಗೂ ಉಮಾಶಂಕರ್ ದಂಪತಿಯ ಮಗುವಿಗೆ ಚಂದ್ರಮತಿ ಎಂದು ಸಿದ್ದರಾಮಯ್ಯ ನಾಮಕರಣ ಮಾಡಿ, ಆಶೀರ್ವದಿಸಿದರು.