ನವದೆಹಲಿ : ಗಂಭೀರ ಅಪರಾಧ ಆರೋಪಗಳ ಹಿನ್ನೆಲೆಯಲ್ಲಿ ಸತತ 30 ದಿನಗಳ ಕಾಲ ಬಂಧನಕ್ಕೆ ಒಳಗಾಗುವ ಪ್ರಧಾನಿ, ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಹುದ್ದೆಯಿಂದ ಕಾಯಂ ಆಗಿ ವಜಾಗೊಳಿಸುವ ಬದಲಿಗೆ ಅಮಾನತು ಮಾಡಬೇಕು ಎಂದು ಜಂಟಿ ಸಂಸದೀಯ ಸಮಿತಿಯು ಮಹತ್ವದ ಶಿಫಾರಸು ಮಾಡಿದೆ. ಹುದ್ದೆಗಳಿಂದ ನೇರ ವಜಾ ಮಾಡುವ ಮೂಲ ಪ್ರಸ್ತಾವನೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ಹಾಗೂ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮಿತಿಯು ಈ ತಿದ್ದುಪಡಿಯನ್ನು ಸೂಚಿಸಿದೆ. ಇದರೊಂದಿಗೆ, ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ನ್ಯಾಯಾಲಯದಿಂದ ದೋಷಮುಕ್ತರಾದರೆ ಅಥವಾ ನಿಗದಿತ ಅವಧಿಯೊಳಗೆ ಅವರ ವಿರುದ್ಧದ ಪ್ರಾಸಿಕ್ಯೂಷನ್ ಪ್ರಕ್ರಿಯೆ ಮುಂದುವರಿಯದಿದ್ದರೆ, ಅಮಾನತು ಆದೇಶವು ತಾನಾಗಿಯೇ ರದ್ದಾಗುವ ನಿಯಮವನ್ನು ಸೇರಿಸಲು ಸಹ ಸಲಹೆ ನೀಡಲಾಗಿದೆ.
ಸದ್ಯ 130ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯು ಈ ವಾರ ತನ್ನ ವರದಿಯನ್ನು ಅಂಗೀಕರಿಸುವ ಸಾಧ್ಯತೆಯಿದೆ. ವರದಿಯ ಅನ್ವಯ, ಕಾನೂನು ಪ್ರಕ್ರಿಯೆಯ ಅಂತಿಮ ಫಲಿತಾಂಶ ಬರುವವರೆಗೆ ಸಚಿವರನ್ನು ಕೇವಲ ಅಮಾನತುಗೊಳಿಸಬೇಕೇ ಹೊರತು ಶಾಶ್ವತವಾಗಿ ವಜಾಗೊಳಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಇನ್ನು ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧಗಳನ್ನು ಮಾತ್ರ ಇಲ್ಲಿ 'ಗಂಭೀರ ಕ್ರಿಮಿನಲ್ ಅಪರಾಧಗಳು' ಎಂದು ಪರಿಗಣಿಸಬೇಕು ಎಂದು ಸಮಿತಿ ವ್ಯಾಖ್ಯಾನಿಸಿದೆ.