ಮಂಗಳೂರು: ನಗರದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ನಾಗುರಿ ಪ್ರದೇಶದಲ್ಲಿ ಇಂದು ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮನೆ ಸಂಪೂರ್ಣ ನೆಲಸಮವಾಗಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.
ಭಾರೀ ಮಳೆಯಿಂದಾಗಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿದ್ದ ಗುಡ್ಡ ಕುಸಿದು, ಅಲ್ಲಿನ ಹೆಂಚಿನ ಮನೆಯ ಮೇಲೆ ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಆರು ಮಂದಿ ಮಣ್ಣಿನಡಿ ಸಿಲುಕಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವು ತೀವ್ರ ಕಾರ್ಯಾಚರಣೆ ನಡೆಸಿತು. ಆದರೆ, ದುರದೃಷ್ಟವಶಾತ್ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರು ಬಿಹಾರ ಮೂಲದವರಾಗಿದ್ದು, ಅವರ ವಿವರ ಹೀಗಿದೆ:
ಶಾಂತ (46 ವರ್ಷ), ಮಹಿಳೆ.
ಅನಾಮಿಕ ಚೌರಾಸಿಯ (8 ವರ್ಷ), ಬಾಲಕಿ.
ಪರಿ (4 ವರ್ಷ), ಬಾಲಕಿ.
ಅವಶೇಷಗಳ ಅಡಿಯಿಂದ ರಕ್ಷಣಾ ತಂಡವು ಬದುಕಿ ಉಳಿದ ಮೂವರನ್ನು ಹೊರತೆಗೆದು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದೆ. ಪಾರಾದವರು
ಬಾಲಕೃಷ್ಣ (48 ವರ್ಷ), ಪುರುಷ.
ಅಲ್ಕಾ (14 ವರ್ಷ), ಬಾಲಕಿ.
ಅನುಷಾ (11 ವರ್ಷ), ಬಾಲಕಿ.
ಮೃತಪಟ್ಟವರು ಮತ್ತು ಗಾಯಾಳುಗಳು ಬಿಹಾರ ರಾಜ್ಯದ ಮೂಲದವರಾಗಿದ್ದು, ಕಳೆದ 20 ವರ್ಷಗಳಿಂದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಈ ದುರಂತ ಅನಿರೀಕ್ಷಿತವಾಗಿ ಆಘಾತವನ್ನುಂಟುಮಾಡಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.