ನವದೆಹಲಿ : ದೇಶಾದ್ಯಂತ ಇರುವ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿಗಳು) ಮತ್ತು ಕಾನೂನು ಜಾರಿ ಸಂಸ್ಥೆಗಳು ತಮ್ಮ ಬಳಿ ಲಭ್ಯವಿರುವ ಅಪಾರ ಪ್ರಮಾಣದ ಕ್ರಿಮಿನಲ್ ಡೇಟಾವನ್ನು ಕಾರ್ಯಸಾಧ್ಯ ಬುದ್ದಿಮತ್ತೆಯಾಗಿ ಪರಿವರ್ತಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ 26ನೇ ಅಖಿಲ ಭಾರತ ಬೆರಳಚ್ಚು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಹಿತಿಯನ್ನು ಬುದ್ಧಿಮತ್ತೆಯಾಗಿ ಪರಿವರ್ತಿಸುವ ಶ್ರೀಕೃಷ್ಣನ ಸಾಮರ್ಥ್ಯವು ಅಂತಿಮವಾಗಿ ಮಹಾಭಾರತದ ಯುದ್ಧದಲ್ಲಿ ಪಾಂಡವರು ಗೆಲ್ಲುವಂತಾಯಿತು ಎಂದು ಉದಾಹರಿಸಿದರು. ಮಹಾಭಾರತದ ಸಮಯದಲ್ಲಿ ಕೃಷ್ಣನು ಮಾಹಿತಿಯನ್ನು ಗುಪ್ತವಾಗಿ ಸಂಗ್ರಹಿಸಿ ಅದನ್ನು ಬುದ್ದಿವಂತಿಕೆಯಿಂದ ಬಳಕೆ ಮಾಡಿದ ಮಾದರಿಯಲ್ಲೇ, ನಮ್ಮ ಪೊಲೀಸ್ ವ್ಯವಸ್ಥೆಯು ಅಪರಾಧದ ವಿರುದ್ಧ ಹೋರಾಡುವಾಗ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸಿ ಸೂಕ್ತ ಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಪರಿವರ್ತಿಸಬೇಕು ಎಂದು ಅವರು ಪ್ರತಿಪಾದಿಸಿದರು.
ತನಿಖೆ ಮತ್ತು ಅಪರಾಧ ತಡೆಗಟ್ಟುವಿಕೆಗೆ ಡೇಟಾ-ಚಾಲಿತ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಪೊಲೀಸ್ ಪಡೆಗಳನ್ನು ಒತ್ತಾಯಿಸಿದ ಗೃಹ ಸಚಿವರು, ಇದೇ ಕಾರ್ಯಕ್ರಮದ ಸಂದರ್ಭದಲ್ಲಿ ಅಭಿಗ್ಯಾನ್ ಆ್ಯಪ್, ಸಿಆರ್ಪಿಐ ಸಿಸ್ಟಮ್, ಇ-ಪ್ರಾಸಿಕ್ಯೂಷನ್ 2.0 ಮತ್ತು ಇ-ಫೊರೆನ್ಸಿಕ್ಸ್ 2.0 ವ್ಯವಸ್ಥೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ರಾಷ್ಟ್ರೀಯ ದತ್ತಸಂಚಯಗಳ ಮಹತ್ವವನ್ನು ಒತ್ತಿ ಹೇಳಿದ ಅವರು, ರಾಜ್ಯಗಳು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನಿರ್ವಹಿಸುವ ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ (NAFIS) ಮತ್ತು ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಕಾಯ್ದೆ 2022ರ ನಿಬಂಧನೆಗಳಂತಹ ವೇದಿಕೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. NAFIS ಇಡೀ ಭಾರತದಾದ್ಯಂತ ಹುಡುಕಬಹುದಾದ ಫಿಂಗರ್ಪ್ರಿಂಟ್ ಡೇಟಾಬೇಸ್ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ನ್ಯಾಯವ್ಯಾಪ್ತಿಯಲ್ಲಿ ಟ್ರ್ಯಾಕಿಂಗ್ ಸಕ್ರಿಯಗೊಳಿಸಲು ಬಂಧಿತ ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟವಾದ ರಾಷ್ಟ್ರೀಯ ಫಿಂಗರ್ಪ್ರಿಂಟ್ ಸಂಖ್ಯೆಯನ್ನು ನಿಯೋಜಿಸುತ್ತದೆ. ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಕಾಯ್ದೆ 2022, ಕಾನೂನು ಜಾರಿ ಸಂಸ್ಥೆಗಳಿಗೆ ತನಿಖಾ ಉದ್ದೇಶಗಳಿಗಾಗಿ ಬಂಧಿತ ಅಥವಾ ಶಿಕ್ಷೆಗೊಳಗಾದ ವ್ಯಕ್ತಿಗಳ ಭೌತಿಕ ಮತ್ತು ಜೈವಿಕ ಮಾಹಿತಿಯನ್ನು ಸಂಗ್ರಹಿಸಿ ಸಂರಕ್ಷಿಸಲು ಅಧಿಕಾರ ನೀಡುತ್ತದೆ ಎಂದು ಅವರು ವಿವರಿಸಿದರು.
ಅಪರಾಧ ತನಿಖೆಗಳಲ್ಲಿ ಬೆರಳಚ್ಚು ಪುರಾವೆಗಳು ಅತ್ಯಂತ ವಿಶ್ವಾಸಾರ್ಹ ಸಾಧನಗಳಲ್ಲಿ ಒಂದಾಗಿ ಉಳಿದಿವೆ. ಆದರೆ, ಇಲ್ಲಿಯವರೆಗೆ NAFIS ಡೇಟಾಬೇಸ್ನ ಕೇವಲ ಶೇಕಡಾ 10 ರಷ್ಟು ಭಾಗವನ್ನು ಮಾತ್ರ ಪರಿಣಾಮಕಾರಿಯಾಗಿ ಬಳಸಲಾಗಿದೆ ಎಂದು ಅವರು ಈ ವೇಳೆ ಕಳವಳ ವ್ಯಕ್ತಪಡಿಸಿದರು. ಈ ಆಧುನಿಕ ವ್ಯವಸ್ಥೆಗಳ ಮೂಲಕ ಲಭ್ಯ ಇರುವ ದತ್ತಾಂಶದ ಸಂಗ್ರಹಣೆ, ವಿಶ್ಲೇಷಣೆ ಮತ್ತು ಕಾರ್ಯಾಚರಣೆಯ ಬಳಕೆಯನ್ನು ಸುಧಾರಿಸಲು ಮುಂದಿನ ವರ್ಷದಲ್ಲಿ ಪೊಲೀಸ್ ಸಿಬ್ಬಂದಿಗೆ ಸಾಪ್ತಾಹಿಕ ತರಬೇತಿ ಅವಧಿಗಳನ್ನು ಕಡ್ಡಾಯವಾಗಿ ಆಯೋಜಿಸುವಂತೆ ಅವರು ದೇಶದ ಎಲ್ಲಾ ಡಿಜಿಪಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.