ಮಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ್ದ ಖರ್ಗೆ, "ಬಿಜೆಪಿ ಹಾಗೂ ಆರ್ಎಸ್ಎಸ್ ವಿಷಕಾರಿ ಹಾವುಗಳಂತೆ. ಒಂದು ವೇಳೆ ಹಾವು ಬಂದರೆ, ನಮಾಜ್ ಅನ್ನು ಅರ್ಧಕ್ಕೆ ನಿಲ್ಲಿಸಿ ಅದನ್ನು ಕೊಲ್ಲಬೇಕು" ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಖರ್ಗೆ ಅವರ ಇಂತಹ ಮಾತುಗಳು ಸಮಾಜದಲ್ಲಿ ದ್ವೇಷ ಬಿತ್ತಲು ಮಾಡುತ್ತಿರುವ ವ್ಯವಸ್ಥಿತ ಸಂಚು ಎಂದು ಕಿಡಿಕಾರಿದರು.
"ರಾಜಕೀಯ ಲಾಭಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರು ಪದೇ ಪದೆ ಹಿಂದೂ ವಿರೋಧಿ ಹಾಗೂ ಆರ್ಎಸ್ಎಸ್ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇಂತಹ ಪ್ರಚೋದನಾಕಾರಿ ಮನಸ್ಥಿತಿಯುಳ್ಳವರ ಕೈಗೆ ಜನರು ಅಧಿಕಾರ ನೀಡಿದರೆ, ಸಮಾಜದಲ್ಲಿ ದಂಗೆಗಳು ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ," ಎಂದು ಡಾ. ಭರತ್ ಶೆಟ್ಟಿ ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷದ ಇಂತಹ 'ನೀಚ ಮನಸ್ಥಿತಿ'ಯನ್ನು ಸಮಾಜದ ಶಾಂತಿ ಮತ್ತು ಸೌಹಾರ್ದತೆಯ ದೃಷ್ಟಿಯಿಂದ ಜನರು ಒಕ್ಕೊರಲಿನಿಂದ ಹೆಮ್ಮೆಟ್ಟಿಸಬೇಕಾಗಿದೆ. ಈ ದೇಶದ ಸಾಂಸ್ಕೃತಿಕ ಬೇರುಗಳಾದ ಆರ್ಎಸ್ಎಸ್ನಂತಹ ಸಂಸ್ಥೆಗಳನ್ನು ಹಾವಿಗೆ ಹೋಲಿಸಿ ಕೊಲ್ಲಬೇಕು ಎಂದು ಹೇಳುವುದು ಅವರ ಹತಾಶೆ ಮತ್ತು ವಿನಾಶಕಾರಿ ಬುದ್ಧಿಯನ್ನು ಪ್ರದರ್ಶಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.