ಮಂಗಳೂರು: ಕಳೆದ ಮೂರು ವರ್ಷಗಳಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಷ್ಟು ಐಟಿ-ಬಿಟಿ ಕಂಪನಿಗಳು ಹಾಗೂ ಸ್ಟಾರ್ಟ್ಅಪ್ಗಳು ಆರಂಭಗೊಂಡಿವೆ ಮತ್ತು ಈ ವಲಯದಲ್ಲಿ ಆಗಿರುವ ಒಡಂಬಡಿಕೆ ಹಾಗೂ ಹೂಡಿಕೆಯ ಮೊತ್ತ ಎಷ್ಟು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಬಜೆಟ್ ಅಧಿವೇಶನದಲ್ಲಿ ಪ್ರಶ್ನಿಸಿದರು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಹೊಸ ಕಂಪನಿಗಳ ಸ್ಥಾಪನೆಯಿಂದ ಜಿಲ್ಲಾವಾರು ಎಷ್ಟು ಜನರಿಗೆ ಉದ್ಯೋಗ ಲಭಿಸಿದೆ ಹಾಗೂ ವಿಶೇಷವಾಗಿ ಕರಾವಳಿ ಭಾಗದಲ್ಲಿ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಸಚಿವರ ದ್ವಂದ್ವ ನಿಲುವನ್ನು ಟೀಕಿಸಿದ ಕಾಮತ್ ಅವರು, "ಸಚಿವರು ಹೊರಗೆ ಮಾತನಾಡುವಾಗ ಮಂಗಳೂರಿನಲ್ಲಿ ಏನೂ ಇಲ್ಲ ಎನ್ನುತ್ತಾರೆ, ಆದರೆ ಸದನದಲ್ಲಿ ಚರ್ಚಿಸುವಾಗ ಮಂಗಳೂರಿನಲ್ಲಿ ಎಲ್ಲವೂ ಇದೆ ಎನ್ನುತ್ತಾರೆ. ಇಂತಹ ಹೇಳಿಕೆಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತವೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.