ಮಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿರುವ ಪ್ರಿಯಾಂಕ್ ಖರ್ಗೆ, ಬಿ.ಕೆ ಹರಿಪ್ರಸಾದ್ ರಂತಹ ಕಾಂಗ್ರೆಸ್ ನಾಯಕರು, ಕೇವಲ ಮುಸ್ಲಿಮರ ಓಲೈಕೆ ಹಾಗೂ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ತಮ್ಮ ಸ್ಥಾನದ ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು.
ಪ್ರಿಯಾಂಕ್ ಖರ್ಗೆಯವರಿಗೆ ತಂದೆಯ ಹೆಸರಿನಿಂದ ಮಂತ್ರಿ ಸ್ಥಾನ ಲಭಿಸಿದೆಯೇ ಹೊರತು ಸ್ವಸಾಮರ್ಥ್ಯದಿಂದಲ್ಲ. ಸಂಘದ ಚಟುವಟಿಕೆಗಳೇನು? ಹಣ ಎಲ್ಲಿಂದ ಬರುತ್ತದೆ? ಎಂದೆಲ್ಲಾ ಕೇಳುವ ಅವರು ಸಂಘದ ಶಾಖೆಗೆ, ಉತ್ಸವಗಳಿಗೆ ಬರಲಿ. ಸ್ವಯಂಸೇವಕರು ತಾಯಿ ಭಾರತ ಮಾತೆಗೆ ತನು ಮನ ಧನವನ್ನು ಹೇಗೆ ಅರ್ಪಣೆ ಮಾಡುತ್ತಾರೆ ಎಂಬುದನ್ನು ಅರಿತುಕೊಳ್ಳಲಿ. 1962 ರ ಚೀನಾ ಯುದ್ಧದ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರ ಕಾರ್ಯವನ್ನು ನೆಹರೂರವರೇ ಶ್ಲಾಘಿಸಿದ್ದರು. ಸಂಘದ ಎರಡನೇ ಸರಸಂಘಚಾಲಕರಾಗಿದ್ದ ಗುರೂಜಿಯವರು ನಿಧನ ಹೊಂದಿದ್ದಾಗ ಇಂದಿರಾಗಾಂಧಿಯವರೇ ಲೋಕಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದರು ಎಂಬ ಇತಿಹಾಸವನ್ನು ಅವರು ಅರಿಯಲಿ ಎಂದರು.
ದೇಶದ ಯಾವುದೇ ಮೂಲೆಯಲ್ಲಿ ಭೂಕಂಪ, ನೆರೆ, ಸುನಾಮಿ ಹೀಗೆ ಯಾವುದೇ ಅವಘಡದ ಸಂದರ್ಭದಲ್ಲಿ ಸ್ವಯಂಸೇವಕರು ಅಲ್ಲಿ ಕಾರ್ಯನಿರತರಾಗಿರುತ್ತಾರೆ. ಕಳೆದ ನೂರು ವರ್ಷಗಳಲ್ಲಿ ಆರ್.ಎಸ್.ಎಸ್ ನಡೆಸಿದ ಸೇವಾ ಚಟುವಟಿಕೆಗಳನ್ನು ಕಾಂಗ್ರೆಸ್ ಮಾಡುವುದು ಬಿಡಿ, ಕನಸಿನಲ್ಲಿಯೂ ಅದರ ಹತ್ತಿರ ಸುಳಿಯಲು ಸಾಧ್ಯವಿಲ್ಲ. ಇಂತಹ ಸಂಘದ ಟೋಪಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಡಿಕೆಶಿಯವರಿಗೆ ಮುಸ್ಲಿಮರ ಟೋಪಿ ಬಗ್ಗೆ ಮಾತನಾಡುವ ಧೈರ್ಯ ಇದೆಯಾ? ನಾನೂ ಕೂಡ ಗಣವೇಶ ಹಾಕಿ ಪಥ ಸಂಚಲನದಲ್ಲಿ ಭಾಗವಹಿಸಿದ್ದೇನೆ. ಮುಂದೆಯೂ ಭಾಗವಹಿಸುತ್ತೇನೆ. ತಾಕತ್ತಿದ್ದವರು ತಡೆಯಿರಿ ಎಂದು ಶಾಸಕ ಕಾಮತ್ ರವರು ಸವಾಲು ಹಾಕಿದರು.