ಮಂಗಳೂರು: ಫೇಸ್ ಬುಕ್, ವಾಟ್ಸ್ ಆ್ಯಪ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಬಿತ್ತುವವರ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಒಳ್ಳೆಯದೇ. ಆದರೆ, ಕೋಮುವಾದ ಮತ್ತು ದ್ವೇಷವನ್ನೇ ಬಿತ್ತುವ ಮತಗ್ರಂಥಗಳ ಮೇಲೆ ಕ್ರಮ ಯಾವಾಗ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಇಂದು ನಗರದ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೋಮುವಾದದ ಮೂಲವು ಮತ ಗ್ರಂಥಗಳಲ್ಲೇ ಇದೆ. 'ಜಿಹಾದ್'ಗೆ ಕರೆ ನೀಡುವ ಮತಗ್ರಂಥ ಕಾಫೀರರನ್ನು ಹೊಡೆಯಿರಿ ಎಂದೂ ಹೇಳುತ್ತದೆ. ಆ ಮತಗ್ರಂಥದ ಮೇಲೆ ಕ್ರಮ ಕೈಗೊಂಡರೆ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಶಾಂತಿ ನೆಲೆಸುತ್ತದೆ ಎಂದು ಸಲಹೆ ನೀಡಿದರು.
'ಕಾಂಗ್ರೆಸ್ ಮುಖಂಡರು ಮತಬ್ಯಾಂಕ್ ರಾಜಕಾರಣ ಮಾಡಬಾರದು. ಸಮಾಜದಲ್ಲಿ ಶಾಂತಿ ನೆಲೆಸಬೇಕೆಂಬ ನಿಜವಾದ ಕಳಕಳಿ ಅವರಿಗಿದ್ದರೆ, ಮತೀಯ ದ್ವೇಷ ಬಿತ್ತುವ ಮತಗ್ರಂಥಗಳನ್ನು ನಿಷೇಧಿಸಲಿ. ಅವುಗಳು ಜಾಗತಿಕ ಕ್ಷೋಭೆಗೆ, ಭಯೋತ್ಪಾದನೆಗೆ ಎಷ್ಟು ಕೊಡುಗೆ ನೀಡಿವೆ ಎಂದು ವಿಮರ್ಶೆ ಮಾಡಲಿ. ಆಗ ಕೋಮುವಾದಿಗಳು ಯಾರು ಎಂಬ ಸತ್ಯ ಅರ್ಥವಾಗುತ್ತದೆ. ಆ ಸತ್ಯ ಹೇಳುವುದಕ್ಕೆ ಅವರಿಗೆ ಧೈರ್ಯ ಇದೆಯೇ' ಎಂದು ಪ್ರಶ್ನಿಸಿದ್ದಾರೆ.
ದಾಳಿಕೋರರು ದೇಶದ ದೇವಸ್ಥಾನಗಳ ವಿಶ್ವವಿದ್ಯಾಲಯಗಳ ನಾಶಕ್ಕೆ ಆಧಾರವಾಗಿ ಬಳಸಿದ್ದು ಮತಗ್ರಂಥವನ್ನೇ, ಭಯೋತ್ಪಾದನೆ ನಡೆಸಲು ಆಧಾರವಾಗಿದ್ದು ಮತಗ್ರಂಥವೇ. ಪಹಲ್ಲಾಮ್ನಲ್ಲಿ ಕೊಲ್ಲುವುದಕ್ಕೂ ಮತಗ್ರಂಥವನ್ನೇ ಆಧಾರವಾಗಿ ಬಳಸಿದರು. ಅಂತಹ ಮತಗ್ರಂಥದಲ್ಲಿ ಮತೀಯ ದ್ವೇಷವನ್ನು ಉಂಟುಮಾಡುವ ಅಂಶಗಳು ಏನಿವೆ ಎಂದು ವಿಮರ್ಶೆ ಆಗಬೇಕಲ್ಲವೇ. ಮಾನವತೆಯ ವಿರುದ್ಧವಾದ ಸಂಗತಿ ಇದ್ದರೆ, ಅದನ್ನು ತೆಗೆದು ಹಾಕಬೇಕೊ ಬೇಡವೋ. 'ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡನ್ನೂ ಈ ಬಗ್ಗೆ ಒತ್ತಾಯಿಸುತ್ತೇನೆ' ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸಾಮರಸ್ಯ ಕಾಪಾಡುವ ಬಗ್ಗೆ ವರದಿ ನೀಡಲು ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ನೇತೃತ್ವದ ನಿಯೋಗ ಭೇಟಿ ನೀಡಿದ ಬಗ್ಗೆ ಮಾತನಾಡಿ, 'ನಾಸಿರ್ ಹುಸೇನ್ ರಾಜ್ಯಸಭಾ ಚುನಾವಣೆ ಗೆದ್ದಾಗ, ಅವರ ಬೆಂಬಲಿಗರು ವಿಧಾನ ಸೌಧದಲ್ಲೇ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದರು. ಈ ಬಗ್ಗೆ ನಾಸಿರ್ ಅವರು ಇದುವರೆಗೂ ಸಿಐಡಿ ಪೊಲೀಸರಿಗೆ ಹೇಳಿಕೆ ನೀಡಿಲ್ಲ. ಬೆಂಬಲಿಗರ ಕೃತ್ಯವನ್ನು ಖಂಡಿಸಿಲ್ಲ. ಅವರು ಕೊಡುವ ವರದಿ ಎಷ್ಟು ಪ್ರಮಾಣಿಕವಾಗಿರುತ್ತದೆ ಎಂಬುದೂ ಸಂಶಯದ ವಿಷಯ. ವರದಿ ತಯಾರಿಸಲು ಅವರನ್ನೇ ಕಾಂಗ್ರೆಸ್ ಕಳುಹಿಸಿದ್ದು ಕೂಡಾ ಸಂಶಯ ಮೂಡಿಸಿದೆ' ಎಂದರು.