ಮಂಗಳೂರು : ಇತಿಹಾಸ ಪ್ರಸಿದ್ದ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದಲ್ಲಿ ನಿನ್ನೆ ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು. ಜನಪದರು ಹೇಳುವ ಹಾಗೇ ಜನಸಾಗರದ ಮೇಲೆ ಸಾಸಿವೆ ಬಿಸಾಕಿದರೂ ಕೆಳಗೆ ಬೀಳಲಾರದು ಎನ್ನುವಂತಿತ್ತು.
ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮರಥೋತ್ಸವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಉತ್ಸವಾದಿಗಳು ನಡೆಯಿತು. ಸಂಸದ ಬ್ರಿಜೇಶ್ ಚೌಟ ಶಾಸಕ ಅಶೋಕ್ ರೈ ರಾಜಕೀಯ ಮರೆತು ಬ್ರಹ್ಮರಥ ಎಳೆದಿದ್ದು ವಿಶೇಷವಾಗಿತ್ತು. ಬ್ರಹ್ಮರಥೋತ್ಸವದ ಮೊದಲು ನಡೆದ ಆಕರ್ಷಕ ಸುಡುಮದ್ದು ಪ್ರದರ್ಶನ 'ಪುತ್ತೂರು ಬೆಡಿ' ಅದ್ದೂರಿಯಾಗಿ ನಡೆಯಿತು. ಭಕ್ತರ ಸೇವೆಯಿಂದಲೇ ಈ ಬಾರಿ ವಿಶೇಷ ಸಿಡಿಮದ್ದು ಪ್ರದರ್ಶನ ನಡೆದಿರುವುದು ವಿಶೇಷವಾಗಿತ್ತು. ಕುಂಬ್ಳೆಯ ಅಶ್ರಫ್ ಮತ್ತು ಪಾಲಕ್ಕಾಡ್ನ ಕುಟ್ಟನ್ ಅವರ ನೇತೃತ್ವದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.