ಬೆಂಗಳೂರು : ಉತ್ತರ ಭಾರತ - ದಕ್ಷಿಣ ಭಾರತದ ವಿಭಜನೆಯನ್ನ ಸೃಷ್ಟಿಸುವ ಮೂಲಕ ರಾಷ್ಟ್ರೀಯ ಏಕತೆಗೆ ಸವಾಲಾಗುತ್ತಿರುವ ಶಕ್ತಿಗಳಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಸರ ಕಾರ್ಯವಾಹ ಸಿ ಆರ್ ಮುಕುಂದ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಅವರು, ಭಾಷೆ ಆಧಾರಿತ, ಉತ್ತರ - ದಕ್ಷಿಣ ವಿಭಜನೆಯು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ. ನಮ್ಮ ಸ್ವಯಂಸೇವಕರು ಮತ್ತು ನಮ್ಮ ವಿಚಾರ ಪರಿವಾರ (ಸೈದ್ಧಾಂತಿಕ ಕುಟುಂಬ)ಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಒಂದಾಗಿ, ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಸಾಮರಸ್ಯ ಮೂಡಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಭಾಷಾ ವಿರೋಧ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಇತರ ವಿಷಯಗಳಿಗೆ ವಿರೋಧವು ರಾಜಕೀಯ ಪ್ರೇರಿತ ಎಂದು ಅವರು ತಿಳಿಸಿದರು.
ಕಳೆದ ತಿಂಗಳು ಕೊಯಮತ್ತೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಭರವಸೆಗಳನ್ನು ಪುನರುಚ್ಚರಿಸಿದ ಅವರು, "ಕೇಂದ್ರದ ನಿರ್ಧಾರಗಳ ಬಗ್ಗೆ ಮಾತನಾಡಲು ಇದು ಸ್ಥಳವಲ್ಲದಿದ್ದರೂ ಸಹ ಸಂಸದ ಸ್ಥಾನಗಳ ಅನುಪಾತ ಕಾಯ್ದುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ'' ಎಂದರು. ಅಸಮಾಧಾನವನ್ನು ಸೃಷ್ಟಿಸಲು ಭಾಷೆಯ ಬಗ್ಗೆ ಇತರ ಸಮಸ್ಯೆಗಳನ್ನು ಮುಂದಿಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ''ಉದಾಹರಣೆಗೆ ಸ್ಥಳೀಯ ಭಾಷೆಯಲ್ಲಿ ರೂಪಾಯಿ ಚಿಹ್ನೆ ಹೊಂದಿರುವುದು. ಈ ವಿಷಯಗಳನ್ನು ಪರಿಹರಿಸಲು ಸಾಮಾಜಿಕ ನಾಯಕರು, ಸಾಮಾಜಿಕ ಗುಂಪುಗಳು ಒಟ್ಟಿಗೆ ಬರಬೇಕು. ನಮ್ಮ ನಮ್ಮ ನಡುವೆಯೇ ಜಗಳವಾಡುವುದು ದೇಶಕ್ಕೆ ಒಳ್ಳೆಯದಲ್ಲ. ಎಲ್ಲರಿಗೂ ನ್ಯಾಯ ನೀಡಬೇಕು, ಆದರೆ, ಅದನ್ನು ಸಾಮರಸ್ಯದಿಂದ ಪರಿಹರಿಸಬಹುದು'' ಎಂದರು.