ಬೆಂಗಳೂರು: ನಬಾರ್ಡ್ ರಾಜ್ಯಕ್ಕಾಗಿ 2025-26ನೇ ಸಾಲಿನಲ್ಲಿ 4.47 ಲಕ್ಷ ಕೋಟಿ ರೂ.ಗಳ ಆದ್ಯತಾ ವಲಯದ ಸಾಲ ಸಾಮರ್ಥ್ಯ ಯೋಜನೆ ರೂಪಿಸಿದೆ. ಇದು 2024-25ನೇ ಸಾಲಿನಲ್ಲಿ ಮಾಡಿದ ಅಂದಾಜಿಗಿಂತ ಶೇ.12.55ರಷ್ಟು ಅಧಿಕವಾಗಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ತಿಳಿಸಿದರು.
ನಬಾರ್ಡ್ನ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ನಬಾರ್ಡ್ ಆಯೋಜಿಸಿದ್ದ 'ರಾಜ್ಯ ಸಾಲ ಗೋಷ್ಠಿ' ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಗ್ರಾಮೀಣ ಜೀವನೋಪಾಯಗಳನ್ನು ಬಲಪಡಿಸುವುದರ ಜೊತೆಗೆ ಕೃಷಿಯ ಸಾಮರ್ಥ್ಯ, ಆರ್ಥಿಕ ಬಲವನ್ನು ಹೆಚ್ಚಿಸಲು ನಬಾರ್ಡ್ ತೋರಿದ ನಿರಂತರ ಬದ್ಧತೆಯನ್ನು ಶ್ಲಾಘಿಸಿದರು.
ಕರ್ನಾಟಕವು ಹಿಂದಿನಿಂದಲೂ ಒಂದು ಕ್ರಿಯಾಶೀಲ ರಾಜ್ಯವಾಗಿದ್ದು, ತನ್ನ ಕೃಷಿ ಬೇರುಗಳನ್ನು ಕೈಗಾರಿಕಾ ಪ್ರಗತಿಯೊಂದಿಗೆ ಸಮತೋಲನಗೊಳಿಸುತ್ತಿದೆ. ಕೃಷಿ ಮಹತ್ವದ ಆಧಾರ ಸ್ತಂಭವಾಗಿ ಉಳಿದಿದ್ದರೂ, ಇಂದಿನ ಗ್ರಾಮೀಣ ಪರಿವರ್ತನೆಯು ತಂತ್ರಜ್ಞಾನ ಅಳವಡಿಕೆ, ಮೂಲಸೌಕರ್ಯ ವಿಸ್ತರಣೆ, ಹವಾಮಾನ ಸೂಕ್ಷ್ಮ ಕಾರ್ಯಾಚರಣೆಗಳು ಮತ್ತು ಕೃಷಿಯೇತರ ಉದ್ಯೋಗಾವಕಾಶಗಳಿಂದ ಪ್ರೇರಿತವಾಗಿದೆ ಎಂದರು.
ಮೂಲ ಸೌಕರ್ಯದ ಸೃಷ್ಟಿಗೆ ಸಾರ್ವಜನಿಕ ಹೂಡಿಕೆಗಳು ಸಾಲದ ಪ್ರಯೋಜನವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ಉತ್ಪ್ರೇರಕವಾಗಿರುವುದರಿಂದ ಗ್ರಾಮೀಣ ಸಂಪರ್ಕ, ನೀರಾವರಿ ಮೂಲಸೌಕರ್ಯ, ಮಾರುಕಟ್ಟೆ ಮತ್ತು ಉಗ್ರಾಣ ಸೌಲಭ್ಯಗಳು, ಆರೋಗ್ಯ ಮತ್ತು ನೈರ್ಮಲ್ಯ, ಕುಡಿಯುವ ನೀರಿನ ಸರಬರಾಜು ಇತ್ಯಾದಿ ಗ್ರಾಮೀಣ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೂಲಕ ಅಂದಾಜು ಸಾಲ ಸಾಮರ್ಥ್ಯವನ್ನು ಬಳಸಿಕೊಳ್ಳಲು ರಾಜ್ಯ ಸುಸಜ್ಜಿತವಾಗಿದೆ ಎಂದು ಉಮಾ ಮಹದೇವನ್ ಹೇಳಿದರು.
ನಬಾರ್ಡ್ ಜೀವಾ ಯೋಜನೆಯಡಿ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಿದ್ದನಗೌಡನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬುಕ್ಕಾಸಾಗರದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾಮಾರವರಿಪಲ್ಲಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಕಾರ್ಯಕ್ರಮ ಕೃಷಿ ಪರಿಸರ ಪರಿವರ್ತನೆಯ ವಿಧಾನವಾಗಿದೆ ಎಂದರು.