ಬೆಂಗಳೂರು:ರಾಜ್ಯದಲ್ಲಿ ಮುಂಬರುವ ಈದ್ ಮಿಲಾದ್ ಹಬ್ಬದ ಸಾರ್ವತ್ರಿಕ ರಜ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಮೂಲ ಆದೇಶದ ಪ್ರಕಾರ ಆಗಸ್ಟ್ 26, 2026ರಂದು ನಿಗದಿಯಾಗಿದ್ದ ಸಾರ್ವತ್ರಿಕ ರಜೆಯನ್ನು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸ್ಥಳೀಯ ಪರಿಸ್ಥಿತಿಗಳನ್ನು ಪರಿಗಣಿಸಿ ಆಗಸ್ಟ್ 25, 2026ಕ್ಕೆ ಬದಲಾಯಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ಸಲ್ಲಿಸಿದ ಮನವಿಯ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಈ ತೀರ್ಮಾನ ಕೈಗೊಂಡಿದೆ. ಇದರನ್ವಯ, ಈ ಎರಡೂ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 25ರ ಮಂಗಳವಾರದಂದೇ ಈದ್ ಮಿಲಾದ್ ಹಬ್ಬದ ಸಾರ್ವತ್ರಿಕ ರಜೆ ಅನ್ವಯವಾಗಲಿದೆ.