ಮಂಗಳೂರು:ನಕಲಿ ಔಷಧ ಜಾಲ, ಆಹಾರ ಕಲಬೆರಕೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಕಾವಲು ಪಡೆ ಯನ್ನು ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ರೂಪಿಸುವ ಚಿಂತನೆ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಕಲಿ ಜಾಲ ಪತ್ತೆ ಹಾಗೂ ಆಹಾರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು. ನಕಲಿ ಔಷಧ ಜಾಲ ಅತ್ಯಂತ ಗಂಭೀರವಾಗಿದ್ದು ಇದೊಂದು ದೊಡ್ಡ ಮಾಫಿಯಾವಾಗಿದೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲದೆ ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಅನಧಿಕೃತ ಕಂಪನಿಗಳಿಂದ ಪೂರೈಕೆಯಾಗುತ್ತಿದೆ. ಜನೌಷಧಿ ಕೇಂದ್ರಗಳಿಗೂ ದಾಳಿ ನಡೆದಿದೆ. ಆದರೆ ಅಲ್ಲಿ ಯಾವುದೇ ನಕಲಿ ಔಷಧಿ ದೊರೆತಿಲ್ಲ ಎಂದು ಸಚಿವರು ಒತ್ತಿ ಹೇಳಿದ್ದಾರೆ. ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಫೈವ್ಸ್ಟಾರ್ ಹೋಟೆಲ್ನಿಂದ ಹಿಡಿದು ತಳಮಟ್ಟದ ಬೀದಿ ಬದಿ ಆಹಾರ ಮಳಿಗೆಗಳಿಗೂ ದಾಳಿ ಮುಂದುವರಿಯಲಿದ್ದು, ದಾಳಿ ಅಥವಾ ಪರಿಶೀಲನೆಯ ಉದ್ದೇಶ ಯಾರಿಗೂ ಶಿಕ್ಷೆ ನೀಡುವುದಲ್ಲ, ಬದಲಿಗೆ ಅವರ ತಪ್ಪನ್ನು ತೋರಿಸಿ ಸರಿಪಡಿಸಿಕೊಳ್ಳಲು ಅವಕಾಶ ನೀಡುವುದು. ಸದ್ಯ ದಾಳಿ ನಡೆಸಿರುವ ಎಲ್ಲ ಕಡೆಗಳಲ್ಲೂ ನೋಟಿಸ್ ಕೊಟ್ಟು ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಹೋಟೆಲ್ ಅಸೋಸಿಯೇಷನ್, ಬೀದಿ ಬದಿ ಆಹಾರ ಮಾರಾಟಗಾರರನ್ನು ಜಿಲ್ಲಾ ಮಟ್ಟದಲ್ಲಿ ಸಭೆ ಕರೆಸಿ ಅವರಿಗೆ ಸ್ವಚ್ಛತೆ ಬಗ್ಗೆ ತರಬೇತಿ ನೀಡಲು ನಿರ್ಧರಿಸಲಾಗುತ್ತದೆ. ಹೋಟೆಲ್ಗಳಲ್ಲಿ ಅಡುಗೆ ಎಣ್ಣೆಯನ್ನು ಮರು ಬಳಕೆ ಮಾಡದೆ ಅದನ್ನು ಬಯೋ ಡೀಸೆಲ್ ಆಗಿ ಬಳಕೆ ಮಾಡುವ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.