image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಹು ಹಂತದ ಭದ್ರತೆಯೊಂದಿಗೆ ಬೇಸ್​ ಕ್ಯಾಂಪ್​ನಿಂದ 5,892 ಮಂದಿ ಭಕ್ತರನ್ನೊಳಗೊಂಡ ತಂಡ ಅಮರನಾಥಕ್ಕೆ ಪ್ರಯಾಣ

ಬಹು ಹಂತದ ಭದ್ರತೆಯೊಂದಿಗೆ ಬೇಸ್​ ಕ್ಯಾಂಪ್​ನಿಂದ 5,892 ಮಂದಿ ಭಕ್ತರನ್ನೊಳಗೊಂಡ ತಂಡ ಅಮರನಾಥಕ್ಕೆ ಪ್ರಯಾಣ

ಜಮ್ಮು: ಪವಿತ್ರ ಅಮರನಾಥ ಗುಹಾ ದೇವಾಲಯದಲ್ಲಿ ಹಿಮಲಿಂಗದ ದರ್ಶನ ಪಡೆಯುವ ವಾರ್ಷಿಕ ಯಾತ್ರೆಗೆ ಮೊದಲ ಹಂತದಲ್ಲಿ 5,880 ಯಾತ್ರಿಗಳು ಜಮ್ಮುವಿನಿಂದ ಪ್ರಯಾಣ ಬೆಳೆಸಿದ್ದಾರೆ.38 ದಿನಗಳ ಕಾಲ ಸಾಗುವ ಈ ಯಾತ್ರೆಗೆ 3,880 ಮೀಟರ್​ ಎತ್ತರದ ದೇಗುಲಕ್ಕೆ ತೆರಳಲು ಯಾತ್ರಿಕರು ಎರಡು ಮಾರ್ಗಗಳ ಮೂಲಕ ತೆರಳಬಹುದಾಗಿದೆ. ಅದರಲ್ಲಿ ಸಾಂಪ್ರದಾಯಿಕ ಮಾರ್ಗವಾಗಿರುವ ಅನಂತ್​ನಾಗ್​ ಜಿಲ್ಲೆಯಲ್ಲಿನ 48 ಕಿ.ಮೀ ದೂರದ ನುನ್ವಾನ್-ಪಹಲ್ಗಾಮ್ ಮಾರ್ಗವಾದರೆ, ಎರಡನೆಯದು 14 ಕಿ.ಮೀ ದೂರದ ಗಂಡೇರ್ಬಲ್ ಜಿಲ್ಲೆಯ ಕಡಿದಾದ ಬಾಲ್ಟಾಲ್ ಮಾರ್ಗವಾಗಿದೆ. ಈ ಯಾತ್ರ ಸ್ಥಳಕ್ಕೆ ತೆರಳುವ ಸಾವಿರಾರು ಯಾತ್ರಾರ್ಥಿಗಳ ಪ್ರಮುಖ ಮಾರ್ಗ ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿಯಾಗಿದೆ.ಮೊದಲ ಬ್ಯಾಚ್​ನಲ್ಲಿ ಯಾತ್ರಾರ್ಥಿಗಳ ಪ್ರಯಾಣಕ್ಕೆ ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್​​ ಗವರ್ನರ್​ ಮನೋಜ್​ ಸಿನ್ಹಾ ಅಧಿಕೃತವಾದ ಚಾಲನೆ ನೀಡಿದರು. ಮೊದಲ ಬ್ಯಾಚ್​ನಲ್ಲಿ 1,115 ಮಹಿಳೆಯರು, 31 ಮಕ್ಕಳು ಹಾಗೂ 16 ತೃತೀಯ ಲಿಂಗಿಗಳು ಸೇರಿದಂತೆ 5,892 ಯಾತ್ರಿಗಳು ಮುಂಜಾನೆ 4.30ಕ್ಕೆ ಬೇಸ್​ ಕ್ಯಾಂಪ್​ನಿಂದ ಪ್ರಯಾಣ ಆರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯಾತ್ರೆಗೆ 3.31 ಲಕ್ಷ ಜನರು ಈ ಬಾರಿ ನೋಂದಣಿ ಮಾಡಿಸಿದ್ದು, ಆಗಸ್ಟ್​ 9 ರಂದು ಯಾತ್ರೆ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೆಫ್ಟಿನೆಂಟ್​ ಗವರ್ನರ್​​ ಬಿಗಿ ಭದ್ರತೆಯಲ್ಲಿ ಭಗವತಿ ನಗರ್​ ಬೇಸ್​ ಕ್ಯಾಂಪ್​ಗೆ ಬಂದು ಪೂಜೆ ಸಲ್ಲಿಸುವ ಮೂಲಕ ಎರಡು ಬೇಸ್​​ ಕ್ಯಾಂಪ್​ಗಳ ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಲೆಫ್ಟಿನೆಂಟ್​ ಗವರ್ನರ್​ ಜೊತೆಯಲ್ಲಿ ಸ್ಥಳೀಯ ಶಾಸಕರು, ಉನ್ನತ ಅಧಿಕಾರಿಗಳು ಹಾಗೂ ವಿವಿಧ ಧಾರ್ಮಿಕ ಸಂಘಟನೆ ಮುಖ್ಯಸ್ಥರು ಹಾಜರಿದ್ದರು.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಜಮ್ಮು ಸಿಟಿಯಲ್ಲಿ ಇಂದು ಒಂದು ದೊಡ್ಡ ಹಬ್ಬ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಉತ್ಸಾಹಭರಿತರಾಗಿದ್ದ ಯಾತ್ರಿಕರು ಅಮರನಾಥ ಯಾತ್ರೆಗೆ ಮುಂದಾಗಿದ್ದಾರೆ. ಜನರು ಎಲ್ಲಾ ಭಯೋತ್ಪಾದಕ ಬೆದರಿಕೆಗಳನ್ನು ಧಿಕ್ಕರಿಸಿ ಶಿವಲಿಂಗ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಂದು ಭಗವತಿ ನಗರ್​ ಬೇಸ್​ ಕ್ಯಾಂಪ್​ನಿಂದ ಮೊದಲ ಬ್ಯಾಚ್​ ಯಾತ್ರೆಗೆ ಚಾಲನೆ ನೀಡಲಾಯಿತು. ಶಿವ ಎಲ್ಲರಿಗೂ ಶಾಂತಿ ಮತ್ತು ಆಶೀರ್ವಾದ ನೀಡಲಿ ಎಂದು ಹಾರೈಸಿದ್ದಾರೆ.

Category
ಕರಾವಳಿ ತರಂಗಿಣಿ